ಕಾಸರಗೋಡು: ಬೇಕಲ ಕೋಟೆ ಬಳಿಯ ಪಳ್ಳಿಕೆರೆ ಬೀಚಿನಲ್ಲಿ ಸಮುದ್ರ ಸ್ನಾನದ ವೇಳೆ ನೀರು ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಸೋಮವಾರ ಪತ್ತೆಯಾಗಿದೆ. ಕೋಟಯಂ ಚಂಗನಾಶ್ಶೇರಿ ನಿವಾಸಿ ಅಪ್ಪು ಟಿ. ಅಬ್ರಹಾಂ (20) ಹಾಗೂ ಸ್ನೇಹಿತ ಅಂಕಿತ್(20) ಮೃತಪಟ್ಟವರು. ಅಬ್ರಹಾಂ ಅವರ ಮೃತದೇಹ ಚಿತ್ತಾರಿ ಅಳಿವೆ ಬಾಗಿಲಿನಲ್ಲಿ ಹಾಗೂ ಅಂಕಿತ್ ಮೃಥದೇಹ ಮುಟ್ಟುಂದಲ ಅಳಿವೆ ಬಾಗಿಲಿಂದ ನಾಗರಿಕರು ಪತ್ತೆ ಹಚ್ಚಿದ್ದರು. ಇಬ್ಬರ ಮೃತದೇಹಗಳನ್ನು ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ.
ಭಾನುವಾರ ನಾಲ್ವರು ಗೆಳೆಯರು ಜತೆಯಾಗಿ ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದ ವೇಳೆ ಇಬ್ಬರು ಬಲವಾದ ತೆರೆಗೆ ಸಿಲುಕಿ ಸಮುದ್ರ ಪಾಲಾಗಿದ್ದರು. ಸ್ನೇಹಿತರಾದ ಅಲನ್ ಸೋನಿ ಮತ್ತು ಅಲನ್ ದೇವಸ್ಯ ಸಾಹಸಕರ ರೀತಿಯಲ್ಲಿ ದಡ ಸೇರಿದ್ದರು. ತಡವಾದರೂ ಅಬ್ರಹಾಂ ಮತ್ತು ಅಂಕಿತ್ ವಾಪಸಾಗದ ಹಿನ್ನೆಲೆಯಲ್ಲಿ ಇವರು ಸಥಳೀಯರಿಗೆ ನೀಡಿದ ಮಾಹಿತಿಯನ್ವಯ ಬೇಕಲ ಬೀಚ್ನಲ್ಲಿ ಕರ್ತವ್ಯದಲ್ಲಿದ್ದ ಲೈಫ್ ಗಾರ್ಡ್ಗಳು ಸ್ಥಳಕ್ಕಾಗಮಿಸಿ ಬೋಟ್ಗಳ ಸಹಾಯದಿಂದ ಹುಡುಕಾಟ ನಡೆಸಿದರೂ ಇವರ ಪತ್ತೆ ಸಾಧ್ಯವಾಗಿರಲಿಲ್ಲ. ಸೋಮವಾರ ಮತ್ತೆ ಹುಡುಕಾಟ ಆರಂಭಿಸುತ್ತಿದ್ದಂತೆ ಮೃತದೇಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.



