ಮುಳ್ಳೇರಿಯ: ಕರ್ನಾಟಕ- ಕೇರಳ ಗಡಿ ಪ್ರದೇಶವಾದ ಗುತ್ಯಡ್ಕದಲ್ಲಿ ಮನೆ ಸಮೀಪ ಕಟ್ಟಿಹಾಕಿದ್ದ ಎರಡು ಸಾಕುನಾಯಿಗಳು ನಿಗೂಢವಾಗಿ ನಾಪತ್ತೆಯಾಗಿದ್ದು, ಸ್ಥಳೀಯರಲ್ಲಿ ಚಿರತೆ ಭೀತಿ ತಲೆದೋರಿದೆ. ಬೆಳ್ಳೂರು ಗ್ರಾಮ ಪಂಚಾಯಿತಿ ಕಾಯರ್ಪದವು ಮೂಲಕ ಕರ್ನಾಟಕದ ಈಶ್ವರಮಂಗಲಕ್ಕೆ ಸಂಪರ್ಕ ಕಲ್ಪಿಸುವ ಗಡಿ ಭಾಗದಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಬೆಳಿಗ್ಗೆ ಮನೆಯವರು ನೋಡಿದಾಗ ಅಂಗಳದ ಬದಿ ಬಿಗಿಯಲಾಗಿದ್ದ ಸಾಕುನಾಯಿಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ.
ಆದರೆ ಸ್ಥಳದಲ್ಲಿ ಯಾವುದೇ ರಕ್ತದ ಕಲೆ ಅಥವಾ ಪ್ರಾಣಿಗಳ ಹೆಜ್ಜೆಗುರುತೂ ಪತ್ತೆಯಾಗಿರಲಿಲ್ಲ. ಅಲ್ಪ ದೂರ ಚಿರತೆಯದ್ದೆಂದು ಸಂಶಯಿಸಲಾಗುವ ಹೆಜ್ಜೆಗುರುತು ಪತ್ತೆಯಾಗಿದ್ದು, ಇದರಿಂದ ಸ್ಥಳೀಯ ನಾಗರಿಕರಲ್ಲಿ ಆತಂಕ ಮನೆಮಾಡಿದೆ.
ಬೆಳ್ಳೂರು ನಾಟೆಕಲ್ಲು ಬಳಿಯ ಜಾಲಮೂಲೆಯಲ್ಲಿ ಇತ್ತೀಚೆಗೆ ಸಾಕುನಾಯಿಯೊಂದನ್ನು ಅಪರಿಚಿತ ಪ್ರಾಣಿ ತಿಂದುಹಾಕಿದ ಸ್ಥಿತಿಯಲ್ಲಿ ಕಳೇಬರ ಪತ್ತೆಯಾಗಿತ್ತು. ಇದು ಚಿರತೆ ದಾಳಿ ನಡೆಸಿರಬೇಕೆಂದು ಸಂಶಯಿಸಲಾಗಿತ್ತು. ಗುತ್ಯಡ್ಕ ಪ್ರದೇಶದಲ್ಲಿನ ವಿದ್ಯಮಾನಗಳ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದು ಸಾರ್ವಜನಿಕರು ಜಾಗ್ರತೆ ಪಾಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

.jpg)
.jpg)
