ಕಾಸರಗೋಡು: ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಲಕ್ಷಾಂತರ ಮಂದಿಗೆ ಜೀವನೋಪಾಯ ಒದಗಿಸಿಕೊಟ್ಟಿರುವ ಬೀಡಿ ಕ್ಷೇತ್ರದ ಕಾರ್ಮಿಕರ ಶೋಷಣೆ ಕೊನೆಗೊಳಿಸಿ ಅವರಿಗೆ ಪುನರ್ವಸತಿಗೆ ಸರ್ಕಾರ ಮುಂದಾಗಬೇಕು ಎಂದು ಭಾರತೀಯ ಮಸೂರ್ ಮಜ್ದೂರ್ ಸಂಘದ ರಾಜ್ಯ ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣ ತಿಳಿಸಿದ್ದಾರೆ.
ಅವರು ಕಾಸರಗೋಡು ಬಿಎಂಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಸರಗೋಡು ಜಿಲ್ಲಾ ಬೀಡಿ ಮಜ್ದೂರ್ ಸಂಘದ ಜಿಲ್ಲಾ ಪ್ರತಿನಿಧಿ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಜೀವನೋಪಾಯದ ಮೂಲವಾಗಿದ್ದ ಬೀಡಿ ಕಾರ್ಮಿಕರು ಇಂದು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವುದಲ್ಲದೆ, ಬಡತನದ ಬದುಕು ಸಾಗಿಸುತ್ತಿದ್ದಾರೆ. ಕಾರ್ಮಿಕರಿಗೆ ಅತೀ ಅಗತ್ಯವಾಗಿರುವ ಪಿಎಫ್ ಪಿಂಚಣಿ ಲಭ್ಯವಾಗಿಸುವಲ್ಲಿ ಸರ್ಕಾರ ತಕ್ಷಣ ಗಮನಹರಿಸಬೇಕು.ಈ ವಲಯದ ಕಾರ್ಮಿಕರಿಗೆ ನಾಮಮಾತ್ರಕ್ಕೆ ಮಾತ್ರ ಡಿಎ ಮುಂತಾದ ಸೌಲಭ್ಯಗಳು ದೊರೆಯುತ್ತಿದ್ದು, ಅವರಿಗೆ ಸರಿಯಾಗಿ ಕೈಸೇರುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಅವರು ಆಗ್ರಹಿಸಿದರು.
ಗಂಗಾಧರನ್ ಕೋವ್ವಲ್ಪಲ್ಲಿ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಮುಖ್ಯ ಭಾಷಣ ಮಾಡಿದರು. ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ಟಿ.ಕೃಷ್ಣನ್, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು, ಜಿಲ್ಲಾ ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್, ಜಿಲ್ಲಾ ಜತೆ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ, ಭಾಸ್ಕರನ್ ಪೆÇಯಿನಾಚಿ, ಗುರುದಾಸ್ ಮಧೂರು, ಮಿನಿ ಶ್ರೀನಿವಾಸನ್, ಮುಳ್ಳೇರಿಯ ಪ್ರಾದೇಶಿಕ ಕಾರ್ಯದರ್ಶಿ ಆನಂದನ್ ಮುಳ್ಳೇರಿಯ, ಕಾಸರಗೋಡು ಪ್ರಾದೇಶಿಕ ಕಾರ್ಯದರ್ಶಿ ಬಾಬುಮೋನ್ ಚೆಂಗಳ ಉಪಸ್ಥಿತರಿದ್ದರು. ಟಿ ಕೃಷ್ಣನ್ ಸ್ವಾಗತಿಸಿದರು. ಮಿನಿ ಶ್ರೀನಿವಾಸನ್ ವಂದಿಸಿದರು.

