ಕಠ್ಮಂಡು (PTI): 'ಭಾರತ ಮತ್ತು ನೇಪಾಳದ ಮಧ್ಯೆ ದೀರ್ಘಕಾಲದಿಂದ ಇರುವ ಗಡಿ ವಿವಾದವನ್ನು ಬಗೆ ಹರಿಸಿಕೊಳ್ಳಲು ಇತಿಹಾಸಕಾರರ, ಸರ್ವೇ ನಡೆಸುವವರ ಮತ್ತು ತಜ್ಞರ ಸಹಕಾರ ತೆಗೆದುಕೊಳ್ಳಲಾಗುವುದು.ಭಾರತ ಕೂಡ ಇದಕ್ಕೆ ಒಪ್ಪಿಕೊಂಡಿದೆ' ಎಂದು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ಸಂಸತ್ತಿಗೆ ತಿಳಿಸಿದರು.
ಕಾಲಾಪಾನಿ, ಲಿಪುಲೆಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳ ಕುರಿತು ಭಾರತ ಮತ್ತು ನೇಪಾಳದ ಮಧ್ಯೆ ಗಡಿ ವಿವಾದವಿದೆ. ಈ ಪ್ರದೇಶಗಳು ನೇಪಾಳ, ಭಾರತ ಮತ್ತು ಟಿಬೆಟ್ ಗಡಿಗಳಿಗೆ ಹೊಂದಿಕೊಂಡಿವೆ. ಈ ಪ್ರದೇಶಗಳು ಉತ್ತರಾಖಂಡದ ಭಾಗಗಳು ಎಂಬುದು ಭಾರತದ ನಿಲುವು.
'ನಾವು ಭಾರತಕ್ಕೆ ಅಧಿಕೃತವಾಗಿಯೇ ಈ ಬಗ್ಗೆ ಪತ್ರ ಕಳುಹಿಸಿದ್ದೆವು. ಭಾರತದ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದೆ. ಭಾರತ ಮಾತ್ರವಲ್ಲ ನಾವು ಕೂಡ ಭಾರತದ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದೇವೆ. ಪ್ರಧಾನಿ ಆದ ಬಳಿಕವೇ ನನಗೆ ಈ ಬಗ್ಗೆ ಮಾಹಿತಿ ತಿಳಿಯಿತು. ಸ್ನೇಹಪೂರ್ವಕವಾಗಿ ವಿವಾದ ಬಗೆಹರಿಸಿಕೊಳ್ಳಲು ನಾವುಗಳು ಒಪ್ಪಿಕೊಂಡಿದ್ದೇವೆ' ಎಂದು ಭಾನುವಾರ ತಿಳಿಸಿದರು.
'ನಾವೂ ಭಾರತದ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡಿದ್ದೇವೆ' ಎಂಬ ಪ್ರಧಾನಿ ಶಾ ಅವರ ಹೇಳಿಕೆಯು ವಿವಾದಕ್ಕೆ ಕಾರಣವಾಯಿತು. ಬಳಿಕ, ಸ್ಪಷ್ಟನೆ ನೀಡಿದ ನೇಪಾಳದ ವಿದೇಶಾಂಗ ಸಚಿವಾಲಯವು, 'ಪ್ರಧಾನಿ ಶಾ ಅವರು ಪ್ರಸ್ತಾಪಿಸಿರುವುದು ಯಾರಿಗೂ ಸೇರದ ಎರಡೂ ದೇಶಕ್ಕೂ ಸೇರದ ಸ್ಥಳವಾಗಿದೆ' ಎಂದಿತು.

