ಮುಂಬೈ: ನೀರವ್ ಮೋದಿ ಸೇರಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಕೇಂದ್ರ ತನಿಖಾ ದಳ(ಸಿಬಿಐ), ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಗುರುವಾರ ತಿಳಿಸಿದೆ.
ಅಲ್ಲದೇ, ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆಯೂ ಕೋರಿದೆ.
ಬ್ಯಾಂಕ್ನ ಮುಂಬೈ ವಲಯ ಕಚೇರಿ ನೀಡಿದ ದೂರಿನ ಅನ್ವಯ, ನೀರವ್ ಮೋದಿ, ಅವರಿಗೆ ಸಂಬಂಧಿಸಿದ ಸಂಸ್ಥೆಗಳು ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಅಪರಿಚಿತ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಸಾಲದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬ್ಯಾಂಕ್ಗೆ ಸುಮಾರು ₹321.88 ಕೋಟಿ ವಂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿತ್ತು.
ಬ್ಯಾಂಕ್ ನಡೆಸಿದ ಆಂತರಿಕ ತನಿಖೆಯಲ್ಲಿ, ನೀರವ್ ಮೋದಿಯ ಪಾಲುದಾರಿಕೆ ಸಂಸ್ಥೆಗಳಾದ ಸೋಲಾರ್ ಎಕ್ಸ್ಪೋರ್ಟ್ಸ್, ಸ್ಟೆಲ್ಲರ್ ಡೈಮಂಡ್ಸ್ ಮತ್ತು ಡೈಮಂಡ್ ಆರ್ಯುಎಸ್ ಹಾಗೂ ಅವರದೇ ಫೈರ್ಸ್ಟಾರ್ ಇಂಟರ್ನ್ಯಾಷನಲ್ ಲಿಮಿಟೆಡ್ ಮತ್ತು ಫೈರ್ಸ್ಟಾರ್ ಡೈಮಂಡ್ಸ್ ಇಂಟರ್ನಾಷನಲ್ ಪ್ರೈವೇಟ್ ಲಿಮಿಟೆಡ್ ನಡುವೆಯೇ ಪದೇ ಪದೇ ವಹಿವಾಟುಗಳು ನಡೆದಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ಹೇಳಿತ್ತು.
ದೂರಿನನ್ವಯ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 (ವಂಚನೆ), ಸೆಕ್ಷನ್ 120-ಬಿ (ಅಪರಾಧ ಸಂಚು) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 13(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆದರೆ, ತನಿಖೆ ವೇಳೆ ಪಿಎನ್ಬಿ ಅಧಿಕಾರಿಗಳ ವಿರುದ್ಧವಾಗಲಿ, ಖಾಸಗಿ ವ್ಯಕ್ತಿಗಳ ವಿರುದ್ಧವಾಗಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಸಿಬಿಐ ಪರ ವಕೀಲ ವಿಕ್ರಮ್ ಸಿಂಗ್ ಗುರುವಾರ ನ್ಯಾಯಾಲಯಕ್ಕೆ ತಿಳಿಸಿದರು.
'ಈ ಪ್ರಕರಣವು ಸಿಬಿಐ ವಿಶೇಷ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿದ್ದು, ಮ್ಯಾಜಿಸ್ಟ್ರೇಟ್ ಅವರಿಂದ ವಿಚಾರಣೆ ನಡೆಸಬೇಕು' ಎಂದೂ ವಾದಿಸಿದರು.
ಸಿಬಿಐ ಮನವಿಯನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಧೀಶ ಜೆ. ಪಿ. ದಾರೇಕರ್, ಪ್ರಕರಣವನ್ನು ವರ್ಗಾವಣೆ ಮಾಡಿದರು.
ನೀರವ್ ಮೋದಿ ಮತ್ತು ಅವರ ಸೋದರ ಮಾವ ಮೆಹುಲ್ ಚೋಕ್ಸಿ ಅವರು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಬಹುಕೋಟಿ ಹಗರಣದ ಪ್ರಮುಖ ಆರೋಪಿಗಳಾಗಿದ್ದಾರೆ.

