ಕಾಸರಗೋಡು: ಕೇರಳ ಶಾಲಾ ಶಿಕ್ಷಕರ ಸಂಘ(ಕೆಎಸ್ಟಿಎ)ರಾಜ್ಯ ಕಾರ್ಯದರ್ಶಿ ಪಿ.ಜೆ. ಬಿನೇಶ್ ಮತ್ತು ವಯನಾಡ್ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಲ್ಸನ್ ಥಾಮಸ್ ಅವರನ್ನು ಕಾಸರಗೋಡಿಗೆ ರಾಜಕೀಯ ಪ್ರೇರಿತವಾಗಿ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಕೆಎಸ್ಟಿಎ ವಯಿಂದ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಎದುರು 'ಶಿಕ್ಷಕರ ವರ್ಗಾವಣೆ ಆದೇಶಗಳನ್ನು ಸುಟ್ಟುಹಾಕುವ ಮೂಲಕ ಪ್ರತಿಭಟನೆ' ನಡೆಸಲಾಯಿತು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಆಯೋಜಿಸಲಾಗಿತ್ತು.
ಕಾಸರಗೋಡು ಪ್ರಧಾನ ಅಂಚೆ ಕಚೇರಿ ವಠಾರದಿಂದ ಆರಂಭಗೊಂಡ ಮೆರವಣಿಗೆ ಕಾಸರಗೋಡು ಕಂದಾಯ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ವರೆಗೆ ನಡೆಯಿತು. ಡಿಇಓ ಕಚೇರಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್ಟಿಎ ರಾಜ್ಯ ಕೋಶಾಧಿಕಾರಿ ಕೆ. ರಾಘವನ್ ಧರಣಿ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಚಳವಳಿಯ ಮುಂಚೂಣಿ ನಾಯಕರನ್ನು ಬೆದರಿಸಲು ಮತ್ತು ಅವರ ಹೋರಾಟ ಹತ್ತಿಕ್ಕಲು ನಡೆಸುತ್ತಿರುವ ಇಂತಹ ಪ್ರಜಾಪ್ರಭುತ್ವ ವಿರೋಧಿ ಕ್ರಮದ ವಿರುದ್ಧ ಸಂಘಟನೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು. ರಾಜಕೀಯ ವೈಷಮ್ಯ ತೀರಿಸಲು ಇಂತಹ ವರ್ಗಾವಣೆ ನಡೆಸಲಾಗುತ್ತಿದ್ದು, ಸರ್ಕಾರ ಅನ್ಯಾಯವಾಗಿ ವರ್ಗಾವಣೆಗೊಳಿಸಿರುವ ಕ್ರಮವನ್ನು ತಕ್ಷಣ ರದ್ದುಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಕೆ ಹರಿದಾಸ್, ಟಿ ಪ್ರಕಾಶನ್, ಕೆವಿ ರಾಜೇಶ್, ಪಿ ಶ್ರೀಕಲಾ, ಎಂ ಸುನಿಲ್ಕುಮಾರ್, ಕೆಜಿ ಪ್ರತೀಶ್, ಕೆ ಲಲಿತಾ, ಎಂ ರಮೇಶ್, ಇ ವಿನೋದ್ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

