ಮಂಜೇಶ್ವರ : ಕೇರಳದ ಗ್ರಂಥಾಲಯ ಚಳುವಳಿಯ ಪಿತಾಮಹನೆಂದು ಕರೆಯಲ್ಪಡುವ ಪಿ. ಎನ್. ಪಣಿಕ್ಕರ್ ರವರ ಚರಮದಿನವನ್ನು ಕೇರಳದಾದ್ಯಂತ ವಾಚನಾ ದಿನವಾಗಿ ಆಚರಿಸಲಾಗುತ್ತದೆ. ಅದರಂತೆ ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೂ ವಾಚನಾ ದಿನಾಚರಣೆಯ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿಯಾದ ವಾರಿಜ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲರವರು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.
ಬಳಿಕ ಸಂಪನ್ಮೂಲ ವ್ಯಕ್ತಿ ವಾರಿಜಾರವರು ಶಾಲಾ ಮಕ್ಕಳಿಗೆ ಕಥೆಗಳನ್ನು ಹೇಳಿ, ಪದ್ಯಗಳನ್ನು ಹಾಡಿ ಮನರಂಜಿಸಿದರು. ಎಲ್ಲಾ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದರು. ಜೊತೆಗೆ ತಾವೇ ತಯಾರಿಸಿ ತಂದ ಮೈಸೂರು ಪ್ಯಾಕ್ ಸಿಹಿ ತಿಂಡಿಯನ್ನು ಎಲ್ಲರಿಗೂ ಹಂಚಿ ಸಿಹಿಯನ್ನುಣಿಸಿದರು. ಅವರಿಗೆ ಶಾಲಾ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಾಚನಾ ವಾರಾಚರಣೆಗೆ ಚಾಲನೆ ನೀಡಲಾಯಿತು. ಆ ಪ್ರಯುಕ್ತ ಹಲವಾರು ಚಟುವಟಿಕೆಗಳು ಹಾಗೂ ಸ್ಪರ್ಧೆಗಳಿಗೂ ಚಾಲನೆ ನೀಡಲಾಯಿತು.

.jpg)
.jpg)
