ಮಧೂರು: ವಿದ್ಯಾರ್ಥಿಗಳು ಸ್ಮಾರ್ಟ್ ಪೋನ್ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಮನರಂಜನೆಗಾಗಿ ಮಾತ್ರವಲ್ಲ, ತಮ್ಮ ಜ್ಞಾನ ಸಂಪಾದನೆಗೂ ಬಳಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.
ಅವರು ಕೂಡ್ಲು ಶ್ರೀ ಗೋಪಾಲಕೃಷ್ಣ ವಿದ್ಯಾಲಯದಲ್ಲಿ ಎಸ್ಸಿ-ಎಸ್ಟಿ ಮಧೂರು ಪಂಚಾಯಿತಿ ಸಮಿತಿ ವತಿಯಿಂದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಶಿಕ್ಷಣ ಸೇರಿದಂತೆ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡಿರುವುದಲ್ಲದೆ, ನರೇಂದ್ರ ಮೋದಿ ಅವರು ಎಸ್ಸಿ-ಎಸ್ಟಿ ಸಮುದಾಯಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಧ್ಯೇಯವನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
ಎಸ್ಸಿ-ಎಸ್ಟಿ ಮೋರ್ಚಾ ಮಧೂರು ಪಂಚಾಯತ್ ಸಮಿತಿ ಅಧ್ಯಕ್ಷ ಮೋಹನನ್ ಕಲಿಯಂಗಾಡ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ 100 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.. ಈ ಸಂದರ್ಭ ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಬಿರ್ಸಾ ಮುಂಡಾ ಅನ್ಸಂಗ್ ಹೀರೋ ಪ್ರಶಸ್ತಿ ಪಡೆದ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಸಂಜೀವ ಪುಲಿಕ್ಕೂರ್ ಅವರನ್ನು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ಮಧೂರು ಪಂಚಾಯತ್ ಸಮಿತಿ ವತಿಯಿಂದ ಎಂ.ಎಲ್.ಅಶ್ವಿನಿ ಸನ್ಮಾನಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹಾಗೂ ಕಾಸರಗೋಡು ಜಿಪಂ ಸದಸ್ಯ ರಾಮಪ್ಪ ಮಂಜೇಶ್ವರ, ಮಧೂರು ಗ್ರಾಪಂ ಅಧ್ಯಕ್ಷೆ ಸುಜ್ಞಾನಿ ಶಾನಬಾಗ್, ಉಪಾಧ್ಯಕ್ಷ ಭಾನುಪ್ರಕಾಶ್, ಸಂಜೀವ ಪುಳಿಕ್ಕೂರು, ಸುಕುಮಾರ್ ಕುದುರೆಪ್ಪಾಡಿ, ಮಾಧವ ಮಾಸ್ಟರ್, ಮಹೇಶ್ ಮಧೂರು, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಕೊಳ್ಳಂಗಾನ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಕುಡ್ಲು, ವಿವೇಕಾನಂದ ನಗರ, ಮಧೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಬ್ಲಾಕ್ ಪಂಚಾಯಿತಿ ಸದಸ್ಯೆ ಲೀಲಾ, ಮಧೂರು ಗ್ರಾಮ ಪಂಚಾಯಿತಿ ಸದಸ್ಯರಾದ ನವನೀತ ರೈ, ಚಂದ್ರಾ ಬಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಕಾಳ್ಯಂಗಾಡ್ ಉಪಸ್ಥಿತರಿದ್ದರು.



