ಕಾಸರಗೋಡು: ರಾಜ್ಯದ ಸಾರ್ವಜನಿಕ ವಿತರಣಾ ಇಲಾಖೆಯಲ್ಲಿನ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ವಿಜಿಲೆನ್ಸ್ ಆ್ಯಂಡ್ ಆ್ಯಂಟಿಕರಪ್ಷನ್ ಬ್ಯುರೋ 'ಆಪರೇಷನ್ ಆಹಾರ ಸುರಕ್ಷತೆ' ಎಂಬ ಹೆಸರಲ್ಲಿ ರಾಜ್ಯಾದ್ಯಂತ ವ್ಯಾಪಕ ಶೋಧ ಆರಂಭಿಸಿದೆ.
'ಪ್ರಾಜೆಕ್ಟ್ ಝೀರೋ' ಎಂಬ ಂಯೋಜನೆಯನ್ವಯ ಕಾರ್ಯಾಚರಣೆ ನಡೆಯುತ್ತಿದ್ದು, ರಾಜ್ಯ ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂ ನೀಡಿದ ನಿರ್ದೇಶದಂತೆ ರಾಜ್ಯದಲ್ಲಿ ಆಯ್ದ 14 ಎಸ್ಎಫ್ಎಸ್ಎ ಗೋದಾಮುಗಳು ಹಾಗೂ 54 ರೇಶನ್ ಅಂಗಡಿಗಳಿಗೆ ವಿಜಿಲೆನ್ಸ್ ವಿಶೇಷ ತಂಡ ಮಂಗಳವಾರ ದಾಳಿ ನಡೆಸಿದೆ. ಕಾಸರಗೋಡು ಜಿಲ್ಲೆಯಲ್ಲಿ ಬಂದ್ಯೋಡಿನ ಗೋದಾಮು ಮತ್ತು ಜಿಲ್ಲೆಯ ನಾಲ್ಕು ರೇಶನ್ ಅಂಗಡಿಗಳಿಗೂ ವಿಜಿಲೆನ್ಸ್ ತಂಡ ದಿಡೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ. ಗೋದಾಮಿನಲ್ಲಿ ನಡೆಸಲಾದ ಪರಿಶೀಲನೆಯಲ್ಲಿ ಅಲ್ಲಿದ್ದ ಬೆಳ್ತಿಗೆ ಅಕ್ಕಿ ಸ್ಟೋಕ್ನಲ್ಲಿ 12 ಕ್ವಿಂಟಾಲ್ನಷ್ಟು ಕಡಿಮೆ ಸ್ಟೋಕ್ ಪತ್ತೆಹಚ್ಚಲಾಗಿದೆ. ಅಲ್ಲದೆ, ಗೋಧಿ ಹಿಟ್ಟಿನಲ್ಲೂ ನಿಗದಿತ ಪ್ರಮಾಣಕ್ಕಿಂತ ಕ್ವಿಂಟಾಲ್ನಷ್ಟು ಹೆಚ್ಚು ದಾಸ್ತಾನು ಇರುವುದನ್ನು ವಿಜಿಲೆನ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದರು.
ಗೋದಾಮುಗಳಲ್ಲಿರುವ ಆಹಾರ ಧಾನ್ಯಗಳ ದಾಸ್ತಾನುಗಳಲ್ಲಿರುವ ವ್ಯತ್ಯಾಸ, ಕಾಳಸಂತೆಯಲ್ಲಿ ಪಡಿತರ ಸಾಮಗ್ರಿ ಮಾರಾಟ, ನಕಲಿ ಲಾಂಗಿಂಗ್ ಬಿಲ್ಲಿಂಗ್ ನಡೆಸುತ್ತಿರುವುದು ಮತ್ತು ತೂಕದಲ್ಲಿ ವ್ಯತ್ಯಾಸ ಮುಂತಾದವುಗಳನ್ನು ವಿಜಿಲೆನ್ಸ್ ವಿಶೇಷವಾಗಿ ಪರಿಶೀಲಿಸುತ್ತಿದೆ.

