ನವದೆಹಲಿ: ಸಾಕ್ಷ್ಯಾಧರಿತ ಯೋಜನೆಗಳನ್ನು ಬೆಂಬಲಿಸಲು ಪಂಚಾಯತ್ ಹಣಕಾಸನ್ನು ಸುಗಮಗೊಳಿಸುವಲ್ಲಿ ಮತ್ತು ನಿಖರವಾದ ಸಾಮಾಜಿಕ-ಆರ್ಥಿಕ ದತ್ತಾಂಶವನ್ನು ಸಂಗ್ರಹಿಸುವಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ. ಅನಂತ ನಾಗೇಶ್ವರನ್ ಶ್ಲಾಘಿಸಿದ್ದಾರೆ.
'ರಾಜ್ಯ ಹಣಕಾಸು ಆಯೋಗಗಳ ದತ್ತಾಂಶ ಸಮಿತಿ' ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿದ ಸಂದರ್ಭ ನಾಗೇಶ್ವರನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವರದಿ ಪಂಚಾಯತ್ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ದತ್ತಾಂಶ ಮೂಲಗಳನ್ನು ಪರಿಶೀಲಿಸಿದ್ದು, ಸಾಕ್ಷ್ಯಾಧಾರಿತ ಹಣಕಾಸು ವಿಶ್ಲೇಷಣೆಯನ್ನು ಬಲಪಡಿಸಲು ದತ್ತಾಂಶ ವ್ಯವಸ್ಥೆಗಳಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಿದೆ.
ವಿಂಗಡಿಸಲಾದ ಜನಸಂಖ್ಯೆಯ ಅಂಕಿ-ಅಂಶಗಳು, ಮಾನವ ಅಭಿವೃದ್ಧಿ ಸೂಚಕಗಳು, ಪಂಚಾಯತ್ ಹಣಕಾಸಿನ ಲೆಕ್ಕಪರಿಶೋಧನೆ, ಆಸ್ತಿಗಳ ವಿವರ ಮತ್ತು ನಾಗರಿಕ ಮೂಲಸೌಕರ್ಯಗಳ ಲಭ್ಯತೆಯನ್ನು ಒಳಗೊಂಡಿರುವ ಜನಸಂಖ್ಯಾ ಮಾಹಿತಿಗೆ ಸಂಬಂಧಿಸಿದ ದತ್ತಾಂಶಗಳ ಕೊರತೆಯನ್ನು ವರದಿ ಗಮನ ಸೆಳೆದಿದೆ.
ಸಾಮಾಜಿಕ-ಆರ್ಥಿಕ ದತ್ತಾಂಶದಿಂದ ಯೋಜನೆಗಳು ಮತ್ತು ಹಣಕಾಸು ಸಂಪನ್ಮೂಲಗಳ ಮಾಹಿತಿ ವರೆಗೆ ವಿವಿಧ ಅಭಿವೃದ್ಧಿ ಸೂಚಕಗಳ ಕುರಿತು ತಳಮಟ್ಟದ ದತ್ತಾಂಶವನ್ನು ಪಡೆಯುವಲ್ಲಿ ರಾಜ್ಯ ಸರ್ಕಾರಗಳು ಸವಾಲುಗಳನ್ನು ಎದುರಿಸುತ್ತಿವೆ.
'ಪಂಚಾಯತ್ಗಳಿಗೆ ಹಂಚಿಕೆಯಾದ ಹಣವನ್ನು ಹೇಗೆ ಖರ್ಚು ಮಾಡಲಾಗುತ್ತಿದೆ ಎಂಬುದು ರಾಜ್ಯ ಹಣಕಾಸು ಆಯೋಗಗಳಿಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಅಲ್ಲದೆ, ಆ ವೆಚ್ಚದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಅವು ಹೆಣಗಾಡುತ್ತವೆ' ಎಂದು ಪಂಚಾಯತ್ ರಾಜ್ ಸಚಿವಾಲಯದ ಮಾಜಿ ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯ ಎಸ್.ಎಂ. ವಿಜಯಾನಂದ ತಿಳಿಸಿದ್ದಾರೆ.

