ಡೆಹ್ರಾಡೂನ್: ರಷ್ಯಾದ ನಿರ್ಬಂಧಿತ ಶ್ಯಾಡೊಫ್ಲೀಟ್ ತೈಲ ಟ್ಯಾಂಕರ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ನಾವಿಕನನ್ನು ಬ್ರಿಟನ್ ಬಂಧಿಸಿದ್ದು, ಇವರನ್ನು ತಕ್ಷಣ ಬಿಡುಗಡೆಗೊಳಿಸಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸು ಕರೆತರಲು ಭಾರತ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕ್ಯಾಪ್ಟನ್ ಕುಟುಂಬದವರು ಮನವಿ ಮಾಡಿದ್ದಾರೆ.
ರಷ್ಯಾದಿಂದ ಭಾರತಕ್ಕೆ ತೈಲ ಸಾಗಿಸುತ್ತಿದ್ದ ಈ ಹಡಗು ಇಂಗ್ಲಿಷ್ ಕಾಲುವೆ ದಾಟುತ್ತಿದ್ದ ಸಂದರ್ಭದಲ್ಲಿ ಬ್ರಿಟನ್ ನ ಸಶಸ್ತ್ರ ಪಡೆಗಳು ಹಡಗನ್ನು ವಶಕ್ಕೆ ಪಡೆದಿದ್ದವು.
ಉತ್ತರಾಖಂಡದ ನೈನಿತಾಲ್ ನಿವಾಸಿ ಅಜಯ್ ಪಂತ್ (38) ಸೌತಮ್ಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜೂನ್ 16ರಂದು ವಿಡಿಯೊ ಲಿಂಕ್ ಮೂಲಕ ಕಾಣಿಸಿಕೊಂಡಿದ್ದು, ಅವರ ವಿರುದ್ಧ ನಿರ್ಬಂಧಿತ ರಷ್ಯನ್ ತೈಲವನ್ನು ರಷ್ಯಾದಿಂದ ಬೇರೆ ದೇಶಕ್ಕೆ ಹಡಗಿನ ಮೂಲಕ ಸಾಗಿಸುತ್ತಿದ್ದ ಆರೋಪ ಹೊರಿಸಲಾಗಿದೆ. ಇದು ರಷ್ಯಾ ಮೇಲಿನ ನಿರ್ಬಂಧ ನಿಬಂಧನೆಗಳ ಅನ್ವಯ ಕಾನೂನುಬಾಹಿರವಾಗಿದೆ.
ಕ್ಯಾಪ್ಟನ್ ಪರ ವಕೀಲ ಜೇಮ್ಸ್ ಡೈಮಂಡ್ ಅವರು, "ಹಡಗು ಎಲ್ಲಿಗೆ ಹೋಗಬೇಕು ಎನ್ನುವುದು ಕ್ಯಾಪ್ಟನ್ ಆಯ್ಕೆಯಲ್ಲ ಅಥವಾ ಯಾವ ಸರಕು ಸಾಗಿಸಬೇಕು ಎನ್ನುವುದು ಅವರ ಆಯ್ಕೆಯಲ್ಲ. ಅವರು ಕಾರ್ಪೊರೇಟ್ ಕಂಪನಿಯ ಆದೇಶವನ್ನು ಪಾಲಿಸುವ ಕೇವಲ ಉದ್ಯೋಗಿ ಮಾತ್ರ "ಎಂದು ಪ್ರತಿಪಾದಿಸಿದರು.
ರಾಯಲ್ ಮೆರೈನ್ಸ್ ಮತ್ತು ನ್ಯಾಷನಲ್ ಕ್ರೈಮ್ ಏಜೆನ್ಸಿ ಅಧಿಕಾರಿಗಳು ಜೂನ್ 14ರಂದು ಎಂವಿ ಸ್ಮಿರ್ಟಾನ್ ಹಡಗು ಬ್ರಿಟನ್ ಜನಪ್ರದೇಶವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಹಡಗಿನ ಮೇಲೆ ದಾಳಿ ನಡೆಸಿದ್ದರು. ಹಡಗಿನ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಂತ್ ಅವರನ್ನು ಬಂಧಿಸಲಾಗಿತ್ತು ಎಂದು ಅಭಿಯೋಜಕ ವರುಣ್ ಚುನಿ ಹೇಳಿದರು. ಜಿಲ್ಲಾ ನ್ಯಾಯಾಧೀಶ ಡೇವಿಡ್ ರಾಬಿನ್ಸನ್ ಅವರು ಪ್ರಕರಣವನ್ನು ವಿಚಾರಣಾ ಸಿದ್ಧತೆ ಮತ್ತು ಮನವಿಗಾಗಿ ಬೋರ್ನ್ಮೌತ್ ಕ್ರೌನ್ ಕೋರ್ಟ್ ಗೆ ವರ್ಗಾಯಿಸಿದ್ದಾರೆ.

