ನವದೆಹಲಿ: ಮೇ 13ರಂದು ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆ ಸಂದರ್ಭ ಅಕ್ರಮ ಮತ್ತು ಕುದುರೆ ವ್ಯಾಪಾರ ನಡೆದಿದ್ದು, ಈ ಸಂಬಂಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅರ್ಜಿಯು ಕೇವಲ ಸಾಂದರ್ಭಿಕ ಆರೋಪದ ಮೇಲೆ ಆಧಾರಿತವಾಗಿದೆ. ಅಕ್ರಮ ನಡೆದಿದೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನು ಒಳಗೊಂಡ ಪೀಠ ಹೇಳಿದೆ.
ಈ ಕುರಿತಂತೆ ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಯಾವುದೇ ಆಧಾರಗಳಿಲ್ಲ ಎಂದಿದೆ.
ಎಐಎಡಿಎಂಕೆಯ 25 ಶಾಸಕರ ಬೆಂಬಲದೊಂದಿಗೆ ಸಿಎಂ ಜೋಸೆಫ್ ಸಿ ವಿಜಯ್ ಬಹುಮತ ಸಾಬೀತುಪಡಿಸಿದ ಬಗ್ಗೆ ಸಿಬಿಐ ತನಿಖೆಗೆ ಅರ್ಜಿದಾರ ಕೆ.ಕೆ. ರಮೇಶ್ ಕೋರಿದ್ದರು.
ಈ ವಿಶ್ವಾಸಮತಯಾಚನೆಯ ಪ್ರಕ್ರಿಯೆಯು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರಾದ ಸಿ.ಆರ್. ಜಯಾ ಸುಕಿನ್ ವಾದಿಸಿದ್ದರು.
ದೇಶದಾದ್ಯಂತ ಆಡಳಿತ ಪಕ್ಷಗಳು ಕುದುರೆ ವ್ಯಾಪಾರದಲ್ಲಿ ತೊಡಗಿದ್ದು, ಶಾಸಕರಿಗೆ ಹಣದ ಆಮಿಷ ಮತ್ತು ಬೆದರಿಕೆ ಹಾಕಲಾಗುತ್ತಿದೆ. ಬಂಡಾಯ ಶಾಸಕರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ ಎಂದೂ ವಾದಿಸಿದ್ದರು.
ಆದರೂ, ವಾದವನ್ನು ಪರಿಗಣಿಸದ ಪೀಠ, ಈ ರಿಟ್ ಅರ್ಜಿಯು ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲದೆ ಸಾಂದರ್ಭಿಕ ಆರೋಪಗಳನ್ನು ಆಧರಿಸಿದೆ ಎಂದು ಅರ್ಜಿಯನ್ನು ತಿರಸ್ಕರಿಸಿದೆ.
ಮೇ 13 ರಂದು ವಿಶ್ವಾಸಮತ ಗೆದ್ದ ಸಿಎಂ ಜೋಸೆಫ್ ಸಿ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರವು ಈ ತೀರ್ಪಿನಿಂದ ನಿಟ್ಟುಸಿರುಬಿಡುವಂತೆ ಮಾಡಿದೆ.

