ರಾಯಪುರ: ಚತ್ತೀಸ್ಗಡದಲ್ಲಿ ಮರಳು ಮಾಫಿಯಾ ಗುಂಪುಗಳ ನಡುವೆ ನಡೆದ ಗ್ಯಾಂಗ್ವಾರ್ನಲ್ಲಿ 30 ಮಂದಿಯ ಗುಂಪೊಂದು ಹೆವಿಡಂಪರ್ ಟ್ರಕ್ಕನ್ನು, ಎಸ್ಯುವಿ ವಾಹನಕ್ಕೆ ಡಿಕ್ಕಿ ಹೊಡೆಸಿ, ಬಳಿಕ ಪೆಟ್ರೋಲ್ ಸುರಿದು ಸುಟ್ಟುಹಾಕಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಇತರ ಮೂವರು ಸುಟ್ಟಗಾಯಗಳೊಂದಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಚತ್ತೀಸ್ಗಡದಲ್ಲಿ ನಡೆದಿದೆ.
ಕೊರಿಯ ಜಿಲ್ಲೆಯ ಸೋನಾಹಟ್ ತಹಶೀಲಿನ ವ್ಯಾಪ್ತಿಯಲ್ಲಿರುವ ಕಟಗೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ದೀರ್ಘ ಸಮಯದಿಂದ ನಡೆಯುತ್ತಿದ್ದ ದ್ವೇಷವೇ ಈ ದಾಳಿಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.
ಎಸ್ಯುವಿನಲ್ಲಿದ್ದವರಲ್ಲಿ ಭರತ್ ಸಿಂಗ್ ಗಹರ್ವಾರ್ ಯಾನೆ ಲಲ್ಲಾ ಸಿಂಗ್ ಎಂಬಾತ ವಾಹನದೊಳಗೆ ಜೀವಂತ ದಹನಗೊಂಡಿದ್ದರೆ, ತೀವ್ರ ಸುಟ್ಟಗಾಯಗಳಾಗಿದ್ದ ಇನ್ನೋರ್ವ ಸಮೀಪದ ಅಂಬಿಕಾಪುರ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಕೊನೆಯುಸಿರೆಳೆದಿದ್ದಾನೆ. ಇತರ ಮೂವರಿಗೆ ಶೇ.40ರಿಂದ ಶೇ.60ರಷ್ಟು ಸುಟ್ಟಗಾಯಗಳಾಗಿದ್ದು, ಜೀವನ್ಮರಣದ ನಡುವ ಹೋರಾಡುತ್ತಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್ನಲ್ಲಿ ರಾಯಪುರಕ್ಕೆ ಕೊಂಡೊಯ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಪ್ರಕರಣದ ಮುಖ್ಯ ಆರೋಪಿಯ ಸಂಬಂಧಿಯೊಬ್ಬನ ಮೇಲೆ ದಾಳಿಗೊಳಗಾದ ಗುಂಪಿನ ಸದಸ್ಯನೊಬ್ಬ ಹಲ್ಲೆ ನಡೆಸಿದ್ದನೆನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಆತನ ಅನುಚರರು ಅಂದು ರಾತ್ರಿ ಮೂರು ವಾಹನಗಳೊಂದಿಗೆ ಎದುರಾಳಿಯ ನಿವಾಸದ ಮೇಲೆ ದಾಳಿ ನಡೆಸಿತ್ತು. ಆದರೆ ಅವರನ್ನು ಅಲ್ಲಿದ್ದವರು ಮಾರಾಕಾಯುಧಗಳಿಂದ ಹೊಡೆದು ಹಿಮ್ಮೆಟ್ಟಿಸಿದ್ದರು.
ಆ ಮೇಲೆ ದಾಳಿಕೋರರು ಭಾರೀ ಗಾತ್ರದ ಟಿಪ್ಪರ್ ವಾಹನವನ್ನು ಚಲಾಯಿಸುತ್ತಾ ಬಂದು, ವಿರೋಧಿ ಗುಂಪಿನವರು ಪ್ರಯಾಣಿಸುತ್ತಿದ್ದ ಟೊಯೊಟಾ ಫಾರ್ಚುನರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದರು. ಇದರ ಪರಿಣಾಮವಾಗಿ ಎಸ್ಯುವಿ ವಾಹನದ ಬಾಗಿಲುಗಳು ಜ್ಯಾಮ್, ಒಳಗಿದ್ದವರಿಗೆ ಹೊರಬರಲು ಸಾಧ್ಯವಾಗಲಿಲ್ಲ. ಆಗ ಗುಂಪು ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿತ್ತು.
ಪೊಲೀಸರು ಸೋನಾಹಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.

