ಕೂಡಲಸಂಗಮ: ಶಬರಿಮಲೈ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದಬೇಕು. ವ್ಯಾಪಾರ ಕೇಂದ್ರವಾಗಬಾರದು ಎಂದು ಅಖಿಲ ಭಾರತ ಅಯ್ಯಪ್ಪ ದೀಕ್ಷಾ ಪ್ರಚಾರ ಸಮಿತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ರಾಜು ದೇಶಪಾಂಡೆ ಹೇಳಿದರು.
ಭಾನುವಾರ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಆವರಣದಲ್ಲಿ ಕರ್ನಾಟಕ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂದಿಂದ ನಡೆದ ರಾಜ್ಯ ಮಟ್ಟದ ಅಯ್ಯಪ್ಪ ಮಹಾಸಂಗಮ ಸಮಾರಂಭದ ಅಯ್ಯಪ್ಪ ಧರ್ಮ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
'ಕೇರಳದ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಮಿಟಿಯವರು ಶಬರಿಮಲೈಗೆ ಬರುವ ಕರ್ನಾಟಕ, ಆಂಧ್ರರಪ್ರದೇಶ, ಮಹಾರಾಷ್ಟ್ರ, ತೆಲಂಗಾಣದ ಭಕ್ತರಿಗೆ ಸೂಕ್ತ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಮಾಡಬೇಕು. ಅದಕ್ಕೆ ಬೇಕಾದ ಸಹಕಾರವನ್ನು ನಮ್ಮ ಸೇವಾ ಸಂಸ್ಥೆಯಿಂದ ಕಲ್ಪಿಸುತ್ತೇವೆ. ಅಧಿಕ ಜೇಷ್ಠ ಪುರುಷೋತ್ತಮ ಮಾಸ ಶಬರಿಮಲೈ ಭಕ್ತರಿಗೆ ಪವಿತ್ರ ತಿಂಗಳು. ಎಲ್ಲ ಭಕ್ತರು ನದಿಗಳ ಸಂಗಮದಲ್ಲಿ ಸೇರಿ ಧಾರ್ಮಿಕ ಕಾರ್ಯ ಮಾಡಿದ್ದೇವೆ. ಕರಿಬಟ್ಟೆಯ ಶಬರಿಮಲೆ ಭಕ್ತರಿಗೆ ತೊಂದರೆ ಆದರೆ ಎಲ್ಲ ಭಕ್ತರೂ ಸಹಕಾರ, ಬೆಂಬಲ ಕೊಡಬೇಕು' ಎಂದರು.
ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಯನಿ ಬಚ್ಚಿರೆಡ್ಡಿ ಮಾತನಾಡಿ, '2008ರಲ್ಲಿ ಆರಂಭವಾದ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಅಂದಿನಿಂದ ಇಂದಿನವರೆಗೆ ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯವನ್ನು ಅಖಿಲ ಭಾರತ ಮಟ್ಟದಲ್ಲಿ ಮಾಡಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ಅಧಿಕ ಮಾಸದಲ್ಲಿ ಅಯ್ಯಪ್ಪ ಮಹಾಸಂಗಮ ಕಾರ್ಯಕ್ರಮ ಮಾಡುತ್ತ ಬಂದಿದೆ. ಈ ವರ್ಷ ಕೂಡಲಸಂಗಮದಲ್ಲಿ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಧಾರ್ಮಿಕ ಕಾರ್ಯ ಮಾಡಿರುವುದು ಸಂತೋಷ ಉಂಟುಮಾಡಿದೆ' ಎಂದರು.
ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂನ ಅನ್ನದಾನ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ, ರಾಷ್ಟ್ರೀಯ ಉಪಾಧ್ಯಕ್ಷ ಆನಂದ ವಾಮನ ನಾಯಕ, ರಾಜ್ಯ ಘಟಕದ ಅಧ್ಯಕ್ಷ ಎನ್. ಜಯರಾಮ, ದಕ್ಷಿಣ ಮಧ್ಯ ಪ್ರಾಂತೀಯ ಕಾರ್ಯದರ್ಶಿ ಎಸ್.ಎನ್. ಕೃಷ್ಣಯ್ಯ, ಶಿವಾನಂದ ಮಸಿಬಿನಾಳ, ರಾಜೇಂದ್ರ ಅನ್ನೇಕರ ಇದ್ದರು.

