ಬದಿಯಡ್ಕ: ಗ್ರಾಮೀಣ ಪ್ರದೇಶದ ಜನರಿಗೆ ಶತಮಾನಗಳಿಂದ ಸೇವೆಯನ್ನು ನೀಡುತ್ತಿರು ಸಹಕಾರಿ ಸಂಸ್ಥೆ ನಾಡಿನ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದೆ. ಗ್ರಾಹಕರ ಸೌಕರ್ಯಕ್ಕಾಗಿ ಆಡಳಿತ ಮಂಡಳಿಯು ದಿಟ್ಟ ಹೆಜ್ಜೆಯನ್ನಿಟ್ಟು ಮುಂದುವರಿಯುತ್ತಿದೆ. ಹಿರಿಯರ ಬೆವರಿನ ಫಲವಾಗಿ ಬೆಳೆದು ಬಂದ ಈ ಸಹಕಾರಿ ಸಂಸ್ಥೆಯು ಇನ್ನಷ್ಟು ಪ್ರಗತಿಯನ್ನು ಸಾಧಿಸುತ್ತಾ ನಾಡಿನ ಜನರಿಗೆ ಸೇವೆಯನ್ನು ನೀಡುವಂತಾಗಲಿ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅಭಿಪ್ರಾಯಪಟ್ಟರು.
ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನ ಬದಿಯಡ್ಕ ಶಾಖೆಯು ಬದಿಯಡ್ಕ ಬಸ್ಸು ತಂಗುದಾಣದ ಪರಿಸರದಲ್ಲಿರುವ ಶಾಸ್ತ್ರೀಸ್ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಬುಧವಾರ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾಂಕ್ ಅಧ್ಯಕ್ಷ ಕೆ.ಗಣಪತಿ ಪ್ರಸಾದ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸಹಕಾರಿ ಇಲಾಖೆಯ ಸಹಾಯಕ ನೊಂದಾವಣಾಧಿಕಾರಿ ವಿನೋದ್ ಕುಮಾರ್ ಸಿ. ಸೇಫ್ ಲಾಕರ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಅನೇಕ ವರ್ಷಗಳಿಂದ ಉತ್ತಮವಾದ ಸೇವೆಯನ್ನು ನೀಡುತ್ತಿದೆ. ಊರಿನ ಜನರ ಬೆಲೆಬಾಳುವ ವಸ್ತುಗಳ ಭದ್ರತೆಯ ದೃಷ್ಟಿಯಿಂದ ಲಾಕರ್ ವ್ಯವಸ್ಥೆಯನ್ನು ಅಳವಡಿಸಿರುವುದು ಶ್ಲಾಘನೀಯ. ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳಲಿ ಎಂದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಪಿ. ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಕುಂಜಾರು ಮುಹಮ್ಮದ್, ನಿವೃತ್ತ ಕಾರ್ಯದರ್ಶಿ ಅಜಿತ ಕುಮಾರಿ ವಿ., ಬ್ಯಾಂಕ್ ನ ಮಾಜಿ ಅಧ್ಯಕ್ಷರುಗಳಾದ ವಿ.ಶ್ರೀಕೃಷ್ಣ ಭಟ್, ಕೆ.ವಿಷ್ಣು ಭಟ್ ಕೋರಿಕ್ಕಾರು, ಜಯದೇವ ಖಂಡಿಗೆ ಶುಭಾಶಂಸನೆಗೈದರು. ಕಾರ್ಯದರ್ಶಿ ಪಿ.ವಿಷ್ಣು ಶರ್ಮ ಸ್ವಾಗತಿಸಿ, ಉಪಾಧ್ಯಕ್ಷ ಅವಿನಾಶ್ ರೈ ವಿ. ವಂದಿಸಿದರು. ಬ್ಯಾಂಕ್ ನ ನಿರ್ದೇಶಕರು, ಗ್ರಾಹಕರು ಪಾಳ್ಗೊಂಡಿದ್ದರು. 1919 ರಲ್ಲಿ ನೀರ್ಚಾಲಿನಲ್ಲಿ ಸ್ಥಾಪಿತವಾದ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನ ಶಾಖೆಯು ಬದಿಯಡ್ಕ ಗಣೇಶ ಮಂದಿರದ ಮುಂಭಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಪ್ರಸ್ತುತ ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವ ಸಲುವಾಗಿ ಬದಿಯಡ್ಕ ಬಸ್ಸು ತಂಗುದಾಣದ ಪಕ್ಕದಲ್ಲಿರುವ ಶಾಸ್ತ್ರೀಸ್ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡಿದೆ.

