ಲಾತೂರ್: ಬಡತನದ ಕಾರಣಕ್ಕೆ ಎತ್ತಿನ ಬದಲು ರೈತನ ಪತ್ನಿಯೇ ಹೆಗಲಿಗೆ ನೊಗ ಹಾಕಿಕೊಂಡು ಹೊಲ ಉಳುತ್ತಿದ್ದ ವಿಡಿಯೊ ಹರಿದಾಡಿದ ಬೆನ್ನಲ್ಲೇ ಎಚ್ಚೆತ್ತ ಮಹಾರಾಷ್ಟ್ರ ಸರ್ಕಾರ ಆ ರೈತ ಕುಟುಂಬಕ್ಕೆ ಹೊಸದೊಂದು ಎತ್ತನ್ನು ಕೊಡುಗೆಯಾಗಿ ನೀಡಿದೆ.
ಲಾತುರ್ ಜಿಲ್ಲೆಯ ದಿಯೋನಿ ತಹಸಿಲ್ನ ಬೊಂಬ್ಲಿ ಖುರ್ದ್ ಗ್ರಾಮದ ರೈತ ಕಾಶೀನಾಥ್ ಗಾಯಕ್ವಾಡ್ ಜೂನ್ 5ರಂದು ಸಿಡಿಲು ಬಡಿದು ತಮ್ಮ ಜೋಡಿ ಎತ್ತುಗಳ ಪೈಕಿ ಒಂದನ್ನು ಕಳೆದುಕೊಂಡಿದ್ದರು.
ಹೊಸ ಎತ್ತನ್ನು ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಹಣವಿಲ್ಲದ ಕಾರಣ, ಕಾಶೀನಾಥ್ ಅವರ ಪತ್ನಿ ಹೌಸಾಬಾಯಿ ಅವರೇ ಎತ್ತಿನ ಸ್ಥಾನದಲ್ಲಿ ನಿಂತು ನೇಗಿಲು ಎಳೆಯುತ್ತಿದ್ದರು.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಎನ್ಸಿಪಿ ಶಾಸಕ ರೋಹಿತ್ ಪವಾರ್ ಅವರು ಮಂಗಳವಾರ ಈ ವಿಡಿಯೊವನ್ನು ಹಂಚಿಕೊಂಡು, 'ಇದು ಮಹಾರಾಷ್ಟ್ರದ ಸಾಮಾನ್ಯ ರೈತರ ದುಸ್ಥಿತಿಗೆ ಕೈಗನ್ನಡಿ' ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಸಂಕಷ್ಟದಲ್ಲಿರುವ ರೈತ ದಂಪತಿಗೆ ತಕ್ಷಣವೇ ನೆರವು ನೀಡುವಂತೆ ತಮ್ಮ ಕಚೇರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಮುಖ್ಯಮಂತ್ರಿಗಳ ಆದೇಶದ ಬೆನ್ನಲ್ಲೇ ಬುಧವಾರ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಗಾಯಕ್ವಾಡ್ ಅವರ ಮನೆಗೆ ಧಾವಿಸಿ, ಸಿಡಿಲು ಬಡಿದು ಎತ್ತು ಮೃತಪಟ್ಟಿರುವುದಕ್ಕೆ ರಾಜ್ಯ ವಿಪತ್ತು ಸ್ಪಂದನಾ ನಿಧಿಯಡಿ ನಿಯಮಾನುಸಾರ ನೀಡಲಾಗುವ ಆರ್ಥಿಕ ಪರಿಹಾರವನ್ನು ಸಹ ಸರ್ಕಾರ ಅನುಮೋದಿಸಿದೆ. ಸರ್ಕಾರದ ಈ ಕ್ಷಿಪ್ರ ಸ್ಪಂದನೆಗೆ ಹೌಸಾಬಾಯಿ ಗಾಯಕ್ವಾಡ್ ದಂಪತಿ ಕೃತಜ್ಞತೆ ಸಲ್ಲಿಸಿದ್ದಾರೆ.

