ಕಠ್ಮಂಡು: 2001ರಲ್ಲಿ ನಡೆದ ರಾಜಮನೆತನದ ಹತ್ಯಾಕಾಂಡಕ್ಕೆ ಸಂಬಂಧಿಸಿದ ಕಡತಗಳನ್ನು ಮರುಪರಿಶೀಲಿಸುವುದಾಗಿ ನೇಪಾಳ ಸರ್ಕಾರ ಮಂಗಳವಾರ ಘೋಷಿಸಿದೆ. ಗೃಹ ಸಚಿವ ಸುದನ್ ಗುರೂಂಗ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ.
ಪ್ರಕರಣದಲ್ಲಿ ಅಂದಿನ ರಾಜ ಬಿರೇಂದ್ರ ಶಾ ಅವರ ಇಡೀ ಕುಟುಂಬವನ್ನು ಹತ್ಯೆಗೈಯಲಾಗಿತ್ತು.
2001ರ ಜೂನ್ 1ರಂದು, ನಾರಾಯಣಹಿತಿ ಅರಮನೆಯಲ್ಲಿ ನಡೆದ ಔತಣಕೂಟದ ವೇಳೆ ಅಂದಿನ ಯುವರಾಜ ದೀಪೇಂದ್ರ, ರಾಜ ಬಿರೇಂದ್ರ ಶಾ, ರಾಣಿ ಐಶ್ವರ್ಯಾ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿತ್ತು.
ದೀಪೇಂದ್ರ ಮದ್ಯದ ಅಮಲಿನಲ್ಲಿ ತನ್ನ ತಂದೆ, ತಾಯಿ(ರಾಜ ಬಿರೇಂದ್ರ ಶಾ, ರಾಣಿ ಐಶ್ವರ್ಯಾ), ಸಹೋದರ, ಸಹೋದರಿ ಮತ್ತು ಕುಟುಂಬದ ಇತರ ಸದಸ್ಯರನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ತನಿಖಾ ಆಯೋಗವು ತನ್ನ ವರದಿಯಲ್ಲಿ ಹೇಳಿತ್ತು. ತನಿಖಾ ಆಯೋಗದ ವರದಿಯನ್ನು, ಆ ಸಮಯದಲ್ಲಿ ಹಲವರು ತಳ್ಳಿಹಾಕಿದ್ದರು.
13 ಜನರ ಕಗ್ಗೊಲೆ:
2001ರ ಜೂನ್ 1ರಂದು ನೇಪಾಳದ ದೊರೆ ಬೀರೇಂದ್ರ (55), ರಾಣಿ ಐಶ್ವರ್ಯ (52), ಒಬ್ಬ ರಾಜಕುಮಾರ ಮತ್ತು ಒಬ್ಬ ರಾಜಕುಮಾರಿ ಹಾಗೂ ರಾಜ ಕುಟುಂಬದ ಇತರ ಒಂಬತ್ತು ಮಂದಿಯನ್ನು ಬರ್ಬರ ರೀತಿಯಲ್ಲಿ ಹತ್ಯೆಗೈಯಲಾಗಿತ್ತು. ರಾಜಮನೆತನಗಳ ಇತಿಹಾಸದಲ್ಲಿಯೇ ಇದು ಅತ್ಯಂತ ಭೀಕರ ಘಟನೆ.
ತನ್ನ ವಿವಾಹಕ್ಕೆ ಸಂಬಂಧಿಸಿದಂತೆ ಉಂಟಾದ ವಿವಾದದಿಂದ ಸಿಟ್ಟಿಗೆದ್ದ ರಾಜಕುಮಾರ ದೀಪೇಂದ್ರ (ರಾಜ ಸಿಂಹಾಸನಕ್ಕೆ ನಿಯೋಜನೆಗೊಂಡಿದ್ದ) ತನ್ನ ತಂದೆ, ತಾಯಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇಡೀ ಕುಟುಂಬವನ್ನೇ ನಾಶ ಮಾಡಲು ಕುಟುಂಬದ ಇತರ ಹನ್ನೊಂದು ಜನರ ಮೇಲೂ ಗುಂಡು ಹಾರಿಸಿದ್ದಲ್ಲದೆ ರಾಜಕುಮಾರ ದೀಪೇಂದ್ರ ತನ್ನ ಹಣೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು.
ರಾಜಕುಮಾರ ತನ್ನ 35ನೇ ವರ್ಷಕ್ಕಿಂತ ಮೊದಲು ಮದುವೆಯಾಗಿ ಮಕ್ಕಳನ್ನು ಪಡೆದರೆ ಅದು ರಾಜಕುಮಾರನ ತಂದೆಯ ಸಾವಿಗೆ ಕಾರಣವಾಗುತ್ತದೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು. ಈ ಜ್ಯೋತಿಷ ನಂಬಿದ್ದ ರಾಣಿ, ರಾಜಕುಮಾರ ಇನ್ನೂ ಆರು ವರ್ಷ ಮದುವೆಯಾಗದಂತೆ ಉಳಿಯಬೇಕೆಂದು ಸೂಚಿಸಿದ್ದರು. ಇದು ಘಟನೆಗೆ ಕಾರಣ ಎನ್ನಲಾಗಿತ್ತು.
ಅಕ್ರಮ ಆಸ್ತಿ ಗಳಿಕೆಯ ಆರೋಪದ ಮೇಲೆ ಗುರೂಂಗ್ ಅವರು ಈ ಹಿಂದೆ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸರ್ಕಾರ ರಚಿಸಿದ್ದ ತನಿಖಾ ಸಮಿತಿಯು ಅವರಿಗೆ ಕ್ಲೀನ್ ಚಿಟ್ ನೀಡಿದೆ. ಸದ್ಯ ಅವರು ಸಚಿವರಾಗಿ ಮತ್ತೆ ಅಧಿಕಾರ ವಹಿಸಿಕೊಂಡಿದ್ದು ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

