ನವದೆಹಲಿ: ಜಾರ್ಖಂಡ್ನಲ್ಲಿ ಗುರುವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದಿಂದಾಗಿ ಕಾಂಗ್ರೆಸ್ ಒಂದು ಸ್ಥಾನ ಕಳೆದುಕೊಂಡಿತು. ಎನ್ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಪರಿಮಳ್ ನಾಥ್ವಾನಿ ಅವರ ಗೆಲುವು ಸಾಧಿಸಿದರು. ಇದರಿಂದಾಗಿ, ಮೈತ್ರಿಕೂಟವು ಮೇಲ್ಮನೆಯಲ್ಲಿ ತನ್ನ ಸಂಖ್ಯಾಬಲವನ್ನು 149 ರಿಂದ 152ಕ್ಕೆ ಹೆಚ್ಚಿಸಿಕೊಂಡಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಚೇರಿಯ ಉಸ್ತುವಾರಿ ಆಗಿರುವ ಪಕ್ಷದ ಅಭ್ಯರ್ಥಿ ಪ್ರಣವ್ ಝಾ ಅವರಿಗೆ ಮತ ಹಾಕದೆ ಮಿತ್ರ ಪಕ್ಷಗಳಾದ ಆರ್ಜೆಡಿ ಹಾಗೂ ಸಿಪಿಐ(ಎಂಎಲ್) ದ್ರೋಹ ಎಸಗಿವೆ ಎಂದು ಕಾಂಗ್ರೆಸ್ ಆರೋಪ ಹೊರಿಸಿತು. ಈ ಆರೋಪವನ್ನು ಸಿಪಿಐ(ಎಂಎಲ್)ಎಲ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ತಳ್ಳಿ ಹಾಕಿದರು.
ಮಿಜೋರಾಂನಲ್ಲಿ ಏಕೈಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಜೋರಮ್ ಪೀಪಲ್ಸ್ ಮೂವ್ಮೆಂಟ್ (ಝಡ್ಪಿಎಂ) ಗೆಲುವು ಸಾಧಿಸಿತು. ಪಕ್ಷದ ಅಭ್ಯರ್ಥಿ ಕೆ. ಲಾಲ್ಟ್ಲುವಾಂಗ್ಕಿಮಾ 26-10 ಅಂತರದಲ್ಲಿ ಗೆದ್ದರು.
ಇದರೊಂದಿಗೆ, ಬಿಜೆಪಿ ನೇತೃತ್ವದ ಎನ್ಡಿಎ 243 ಸ್ಥಾನಗಳ ಸದನದಲ್ಲಿ ಮೂರನೇ ಎರಡರಷ್ಟು ಬಹುಮತದತ್ತ (163 ರತ್ತ) ಸಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮೂರು ಸ್ಥಾನಗಳಿಗೆ ಉಪಚುನಾವಣೆ ನಡೆದಾಗ ಮೈತ್ರಿಕೂಟದ ಸಂಖ್ಯೆ 155ಕ್ಕೆ ಹೆಚ್ಚಾಗಬಹುದು. ಆದರೆ, ವಿರೋಧ ಪಕ್ಷಗಳ ಒಕ್ಕೂಟದಿಂದ ಡಿಎಂಕೆ ಹೊರಬಂದ ಕಾರಣ 'ಇಂಡಿಯಾ' ಬಣದ ಸಂಖ್ಯೆ 64 ಕ್ಕೆ ಇಳಿದಿದೆ. ಇತರ ಪಕ್ಷಗಳು 26 ಸಂಸದರನ್ನು ಹೊಂದಿವೆ.
ಇದಕ್ಕೂ ಮೊದಲು, ಬಿಜೆಪಿ ಮತ್ತು ಮಿತ್ರಪಕ್ಷಗಳು 19 ಸ್ಥಾನಗಳನ್ನು ಅವಿರೋಧವಾಗಿ ಗೆದ್ದವು. 'ಇಂಡಿಯಾ' ಬಣದ ಐವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ನ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದರಿಂದಾಗಿ ಬಿಜೆಪಿಯು ಮಧ್ಯಪ್ರದೇಶದಿಂದ ಹೆಚ್ಚುವರಿ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಒಟ್ಟು 27 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಜಾರ್ಖಂಡ್ನಲ್ಲಿ 'ಇಂಡಿಯಾ' ಬಣವು ತನ್ನ ಇಬ್ಬರು ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ 56 ಮತಗಳನ್ನು ಹೊಂದಿತ್ತು. ಆದರೆ, ಕನಿಷ್ಠ ಐದು ಇಂಡಿಯಾ ಬಣದ ಶಾಸಕರು ಅಡ್ಡ ಮತದಾನ ಮಾಡಿದರು.
ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಆಪ್ತರಾಗಿರುವ ಕಾರ್ಪೊರೇಟ್ ಕಾರ್ಯನಿರ್ವಾಹಕ ಅಧಿಕಾರಿ ನಾಥ್ವಾನಿ ಅವರು 2008ರಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರು 2008 ಮತ್ತು 2014ರಲ್ಲಿ ಜಾರ್ಖಂಡ್ನಿಂದ ಗೆದ್ದಿದ್ದರು. ಬಳಿಕ 2020 ರಲ್ಲಿ ವೈಎಸ್ಆರ್ ಕಾಂಗ್ರೆಸ್ ಸೇರಿ ಆಂಧ್ರಪ್ರದೇಶದಿಂದ ಗೆಲುವು ಸಾಧಿಸಿದ್ದರು.

