ಜೈಪುರ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನಿರುದ್ಯೋಗದ ವಿರುದ್ಧ ಇಲ್ಲಿ ನಡೆದ ಪ್ರತಿಭಟನೆಯ ವೇಳೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಕೆಲವರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ದೀಪ್ಕೆ ಅವರ ಬೆಂಬಲಿಗರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿಸುತ್ತಿದ್ದಾಗ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಘಟನೆಯ ಬಳಿಕ ಪ್ರತಿಕ್ರಿಯಿಸಿದ ದೀಪ್ಕೆ, ದಾಳಿಗಳ ಮೂಲಕ ತಮ್ಮನ್ನು ಮೌನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. "ಎಷ್ಟೇ ದಾಳಿಗಳು ನಡೆದರೂ ನಾವು ಹಿಂಸೆಯ ಮಾರ್ಗ ಅನುಸರಿಸುವುದಿಲ್ಲ. ಭಯಭೀತರಾದವರೇ ಹಿಂಸೆಗೆ ಮೊರೆ ಹೋಗುತ್ತಾರೆ. ನೂರಾರು ದಾಳಿಗಳನ್ನು ನಡೆಸಿದರೂ ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
NEET ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನಿರುದ್ಯೋಗದ ವಿರುದ್ಧ ಪ್ರತಿಭಟಿಸಲು ನೂರಾರು ಯುವಕರು ಜೈಪುರದ ಹುತಾತ್ಮ ಸ್ಮಾರಕದ ಬಳಿ ಸೇರಿದ್ದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೀಪ್ಕೆ, NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಉಲ್ಲೇಖಿಸಿ ರಾಜಸ್ಥಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಶ್ನೆಪತ್ರಿಕೆ ಸೋರಿಕೆಯನ್ನು ಕೆಲ ಸಚಿವರು ಗಂಭೀರ ವಿಷಯವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಕಳೆದ ವರ್ಷ ಝಾಲಾವಾರ್ ನಲ್ಲಿ ಶಾಲೆಯೊಂದು ಕುಸಿದು ಬಿದ್ದು ಹಲವು ವಿದ್ಯಾರ್ಥಿಗಳು ಮೃತಪಟ್ಟ ಘಟನೆಯನ್ನು ಪ್ರಸ್ತಾಪಿಸಿದರು.
"ಜನಪ್ರತಿನಿಧಿಗಳ ಮಕ್ಕಳಿಗೆ ಇಂತಹ ಘಟನೆ ಸಂಭವಿಸಿದ್ದರೆ ಸರ್ಕಾರದ ಪ್ರತಿಕ್ರಿಯೆ ಇದೇ ರೀತಿಯದ್ದಾಗಿರುತ್ತಿತ್ತೇ" ಎಂದು ಪ್ರಶ್ನಿಸಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
"ನೀವು ರಷ್ಯಾ-ಉಕ್ರೇನ್ ಯುದ್ಧವನ್ನು ತಡೆದಿದ್ದೀರಿ ಎಂದು ಹೇಳಿಕೊಳ್ಳುತ್ತೀರಿ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಏಕೆ ತಡೆಯಲಿಲ್ಲ ಎಂಬುದನ್ನು ಮಹಾಮಾನವರನ್ನು ಕೇಳಲು ಬಯಸುತ್ತೇನೆ. ಬೇಕಿದ್ದರೆ ನನ್ನನ್ನು ಪಾಕಿಸ್ತಾನಿ ಎಂದು ಕರೆಯಿರಿ. ಇಲ್ಲಿ ನೆರೆದಿರುವವರನ್ನು ಪಾಕಿಸ್ತಾನಿ ಎಂದು ಕರೆಯಿರಿ. ನಿಮ್ಮನ್ನು ಪ್ರಶ್ನಿಸುವ ಮಾಧ್ಯಮಗಳಿಗೂ ಪಾಕಿಸ್ತಾನಿ ಎಂಬ ಹಣೆಪಟ್ಟಿ ಕಟ್ಟಿ" ಎಂದು ಅವರು ಹೇಳಿದರು.
ಇದೇ ವೇಳೆ, CJP ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಸಿಕ್ಕಿಂ ಮೂಲದ ಬೇವೇಷ್ ಅಧಿಕಾರಿ ಅವರ ಮೇಲೂ ಹಲ್ಲೆ ನಡೆದಿರುವುದಾಗಿ ತಿಳಿದುಬಂದಿದೆ. ಗಲಾಟೆಯ ವೇಳೆ ಅವರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೇವೇಷ್ ಅಧಿಕಾರಿ, ತಮ್ಮನ್ನು ರಕ್ಷಿಸಿದ ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು.

