ನವದೆಹಲಿ: 1986ರಲ್ಲಿ ಪಂಜಾಬ್ನ ಅಮೃತಸರದ ಪ್ರಸಿದ್ಧ ಸ್ವರ್ಣಮಂದಿರದಲ್ಲಿ ಶಸ್ತ್ರಸಜ್ಜಿತ ಉಗ್ರರನ್ನು ಮಟ್ಟ ಹಾಕಲು ನಡೆದಿದ್ದ 'ಆಪರೇಷನ್ ಬ್ಲ್ಯಾಕ್ ಥಂಡರ್-1' ಕಾರ್ಯಾಚರಣೆಯ ವೇಳೆ ನೇತೃತ್ವ ವಹಿಸಿದ್ದ ರಾಷ್ಟ್ರೀಯ ಭದ್ರತಾ ದಳದ (ಎನ್ಎಸ್ಜಿ) ಮೊದಲ ಮಹಾನಿರ್ದೇಶಕ (ಡಿ.ಜಿ) ಆರ್.ಟಿ. ನಾಗರಾಣಿ ಭಾನುವಾರ ನಿಧನರಾದರು.
ಅವರಿಗೆ 98 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ದಕ್ಷಿಣ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ನಾಗರಾಣಿ ಕೊನೆಯುಸಿರೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಗರಾಣಿ ಅವರ ಅಂತ್ಯಕ್ರಿಯೆ ಮಂಗಳವಾರ ನೆರವೇರಲಿದೆ.
ಆಂಧ್ರಪ್ರದೇಶ ಕೆಡರ್ನ 1951ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ನಾಗರಾಣಿ ಅವರು, 1984ರ ಆಗಸ್ಟ್ 17ರಿಂದ 1986ರ ಸೆಪ್ಟೆಂಬರ್ 25ರವರೆಗೆ 'ಬ್ಲ್ಯಾಕ್ ಕ್ಯಾಟ್ಸ್' ಕಮಾಂಡೋ ಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಭಯೋತ್ಪಾದನಾ ನಿಗ್ರಹ, ವಿಮಾನ ಅಪಹರಣ ತಡೆ ಮತ್ತು ಒತ್ತೆಯಾಳುಗಳ ರಕ್ಷಣೆಗಾಗಿ 1984ರಲ್ಲಿ ಎನ್ಎಸ್ಜಿ ಸ್ಥಾಪನೆಯಾಗಿತ್ತು.
ಅಧಿಕೃತ ದಾಖಲೆಗಳ ಪ್ರಕಾರ, 1986ರ ಏಪ್ರಿಲ್ 30ರ ರಾತ್ರಿ ಸ್ವರ್ಣಮಂದಿರದ ಸಂಕೀರ್ಣದಲ್ಲಿ 'ಆಪರೇಷನ್ ಬ್ಲ್ಯಾಕ್ ಥಂಡರ್-1' ಆರಂಭಗೊಂಡು, ಮರುದಿನ ಬೆಳಗಿನ ಜಾವದವರೆಗೆ ನಡೆಯಿತು. ಸ್ವರ್ಣಮಂದಿರದ ಪಾವಿತ್ರ್ಯತೆಗೆ ಯಾವುದೇ ಧಕ್ಕೆಯಾಗದಂತೆ, ಸಿಬ್ಬಂದಿ ಬರಿಗಾಲಿನಲ್ಲಿ ಹಾಗೂ ತಲೆಮುಚ್ಚಿಕೊಂಡು ಕಾರ್ಯಾಚರಣೆ ನಡೆಸಿದ್ದರು. ಯಾವುದೇ ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ 122 ಶಂಕಿತರನ್ನು ವಶಕ್ಕೆ ಪಡೆಯಲಾಗಿತ್ತು.
1987ರಲ್ಲಿ ನಿವೃತ್ತರಾಗಿದ್ದ ನಾಗರಾಣಿ ಅವರು ಮೂವರು ಪುತ್ರರನ್ನು ಅಗಲಿದ್ದಾರೆ. ನಾಗರಾಣಿ ಅವರ ನಿಧನಕ್ಕೆ ಎನ್ಎಸ್ಜಿ ಸಂತಾಪ ಸೂಚಿಸಿದೆ.

