ಕಾಸರಗೋಡು: ಉಕ್ರೇನ್ನ ನಗರ ಒಡೆಸಾ ಕರಾವಳಿಯಲ್ಲಿ ಸರಕು ಸಾಗಾಟದ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ ಹತ್ತುಮಂದಿಯಲ್ಲಿ ಕಾಸರಗೋಡು ನಿವಾಸಿ ಒಳಗೊಂಡಿದ್ದಾರೆ.
ಮೃತರನ್ನು ಕಾಸರಗೋಡಿನ ವೆಳ್ಳರಿಕುಂಡು ಎಕೆಜಿ ನಗರದ ನಿವಾಸಿ ಅಖಿಲ್ ಜೋಯಲ್(26) ಎಂದು ಗುರುತಿಸಲಾಗಿದೆ. ಗಿನಿಯಾ-ಬಿಸಾವು ಧ್ವಜವನ್ನು ಹೊಂದಿದ್ದ ಹಡಗಿನ ಮೇಲೆ ರಷ್ಯಾದ ಕ್ರೂಸ್ ಕ್ಷಿಪಣಿ ದಾಳಿ ನಡೆದಿರುವುದಾಗಿ ಉಕ್ರೇನ್ ವಾಯುಪಡೆ ವರದಿ ಮಾಡಿದೆ. 'ಗೋಲ್ಡನ್ ಲಿಯೋ' ಹೆಸರಿನ ಈ ಹಡಗಿನಲ್ಲಿ ಭಾರತೀಯ ಮತ್ತು ಸಿರಿಯನ್ ನಾವಿಕರಿದ್ದರು. ಎಂಟು ಮಂದಿಯನ್ನು ರಕ್ಷಿಸಲಾಗಿದೆ ಎಂದು ಉಕ್ರೇನ್ ನೌಕಾಪಡೆ ತಿಳಿಸಿದೆ. ಜೊತೆಗೆ, ಉಕ್ರೇನ್ನ ಪೈಲಟ್ ಒಬ್ಬರು ಮೃತಪಟ್ಟಿದ್ದಾರೆ. ಮುಂಬೈ ಕೇಂದ್ರೀಕರಿಸಿ ಹಡಗು ಸಂಸ್ಥೆ ಕಾರ್ಯಾಚರಿಸುತ್ತಿತ್ತು. ಹಡಗಿನಲ್ಲಿ ಒಟ್ಟು 17ಮಂದಿ ನಾವಿಕರಿದ್ದರೆನ್ನಲಾಗಿದೆ.
ಅಖಿಲ್ ಜೋಯಲ್ ಅವರು ಎಕೆಜಿ ನಗರದ ಜೋಯಲ್-ಸಾಲಿ ದಂಪತಿಯ ಪುತ್ರ. ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲೇ ಹಡಗಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಜೋಯಲ್, ಒಬ್ಬ ಉತ್ತಮ ಹಗ್ಗಜಗ್ಗಾಟ ಕ್ರೀಡಾಪಟುವಾಗಿದ್ದರು. ರಜೆಯಲ್ಲಿ ಊರಿಗೆ ಆಗಮಿಸಿದ್ದ ಅಖಿಲ್ ಅವರು ತಮ್ಮ ವಿವಾಹ ನಿಶ್ಚಿತಾರ್ಥ ನಡೆಸಿದ ನಂತರ, ಒಂದು ತಿಂಗಳ ಹಿಂದಷ್ಟೇ ಕೆಲಸಕ್ಕೆ ವಾಪಸಾಗಿದ್ದರು.

.jpg)

