ಚಂಡಿಗಢ: ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ಶುಕ್ರವಾರ ಹಸಿರು ನಿಶಾನೆ ತೋರಿಸಲಿದ್ದಾರೆ.
ಈ ರೈಲು ಸೋರಿಕೆ, ಶಾಖ, ಜ್ವಾಲೆ ಮತ್ತು ಹೊಗೆಯನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಬಹು-ಪದರದ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿದೆ.
ಈ ರೈಲು ಜಿಂದ್ ಮತ್ತು ಸೋನಿಪತ್ ರೈಲು ನಿಲ್ದಾಣಗಳ ನಡುವೆ ಸಂಚರಿಸಲಿದೆ.
ಮೇಲ್ಭಾಗದ ವಿದ್ಯುತ್ ತಂತಿಗಳಿಂದ ವಿದ್ಯುತ್ ಶಕ್ತಿಯನ್ನು ಪಡೆಯುವ ಸಾಂಪ್ರದಾಯಿಕ ಎಲೆಕ್ಟ್ರಿಕ್ ರೈಲುಗಳಿಗಿಂತ ಭಿನ್ನವಾಗಿ, ಈ ಹೈಡ್ರೋಜನ್ ಇಂಧನ ಕೋಶದ ರೈಲು ಹೈಡ್ರೋಜನ್ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆಯ ಮೂಲಕ ರೈಲಿನ ಒಳಗಡೆಯೇ ವಿದ್ಯುತ್ ಉತ್ಪಾದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ನೀರಿನ ಆವಿ ಮತ್ತು ಶಾಖ ಮಾತ್ರ ಉಪ ಉತ್ಪನ್ನಗಳಾಗಿ ಹೊರಹೊಮ್ಮುತ್ತವೆ.
ಒಂದು ರೀತಿಯಲ್ಲಿ ಈ ರೈಲು ಹಿಂದೆ ಇದ್ದ ಉಗಿ ಮತ್ತು ಡೀಸೆಲ್ ಎಂಜಿನ್ಗಳಂತೆ ತನ್ನದೇ ಆದ ಸ್ವಂತ ಇಂಧನ ಮೂಲವನ್ನು ಹೊತ್ತು ಸಾಗುತ್ತದೆ. ಆದರೆ, ಕಲ್ಲಿದ್ದಲು ಅಥವಾ ಡೀಸೆಲ್ನಂತಹ ಸಾಂಪ್ರದಾಯಿಕ ಇಂಧನಗಳನ್ನು ಸುಡುವ ಬದಲು, ವಾತಾವರಣದಲ್ಲಿನ ಆಮ್ಲಜನಕವನ್ನು ಬಳಸಿ ರೈಲಿನ ಒಳಗಡೆಯೇ ಹೈಡ್ರೋಜನ್ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇದು ದಹನ ಪ್ರಕ್ರಿಯೆ ಮತ್ತು ಬಾಹ್ಯ ವಿದ್ಯುತ್ ಪೂರೈಕೆಯ ಅವಲಂಬನೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ ಎಂದು ಗುರುವಾರ ಬಿಡುಗಡೆ ಮಾಡಲಾದ ಅಧಿಕೃತ ಪ್ರಕಟಣೆ ತಿಳಿಸಿದೆ.
ಕ್ಲೀನ್ ಹೈಡ್ರೋಜನ್ ತಂತ್ರಜ್ಞಾನದ ಮೂಲಕ ರೈಲಿನ ಒಳಗೇ ವಿದ್ಯುತ್ ಉತ್ಪಾದನೆಯಾಗುವುದರಿಂದ ಈ ರೈಲು ಪರಿಸರ ಸ್ನೇಹಿ ರೈಲು ಸಾರಿಗೆಯ ಅತ್ಯುನ್ನತ ಮಾದರಿಯನ್ನು ಪ್ರತಿನಿಧಿಸುತ್ತದೆ ಮತ್ತು ಸುಸ್ಥಿರ ಸಾರಿಗೆ ಭವಿಷ್ಯಕ್ಕೆ ಶಕ್ತಿ ತುಂಬುತ್ತದೆ.
ಗಂಟೆಗೆ 75 ಕಿ.ಮೀ. ಕಾರ್ಯಾಚರಣೆಯ ವೇಗ ಮತ್ತು ಗಂಟೆಗೆ 110 ಕಿ.ಮೀ. ವಿನ್ಯಾಸದ ವೇಗವನ್ನು ಹೊಂದಿರುವ ಈ ರೈಲು 89 ಕಿ.ಮೀ. ಉದ್ದದ ಜಿಂದ್-ಸೋನಿಪತ್ ಮಾರ್ಗದಲ್ಲಿ ಸುರಕ್ಷಿತವಾಗಿ ಮಾತ್ರವಲ್ಲದೆ, ಹೆಚ್ಚು ವೇಗವಾಗಿ ಸಂಚರಿಸಲಿದೆ.

