ಕಾಸರಗೋಡು: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಜಿಲ್ಲಾ ಮಟ್ಟದ ಸಿಟ್ಟಿಂಗ್ ಕಲೆಕ್ಟ್ರೇಟ್ ಕಾನ್ಫರೆನ್ಸ್ ಹಾಲ್ನಲ್ಲಿ ಜರಗಿತು. ಅಧ್ಯಕ್ಷ ಕೆ.ವಿ. ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಆಯೋಗದ ಸದಸ್ಯ ಕೆ.ಬಿ. ಮೋಹನ್ ಕುಮಾರ್ ಹಿಯರಿಂಗ್ ನಡೆಸಿದರು. ಪರಿಗಣಿಸಿದ 3೦ ದೂರುಗಳ ಪೈಕಿ 20 ದೂರುಗಳನ್ನು ಇತ್ಯರ್ಥಗೊಳಿಸಲಾಯಿತು. ೧೦ ಪ್ರಕರಣಗಳನ್ನು ಆಯೋಗದ ಆದೇಶ ಹಾಗೂ ನಿರ್ದೇಶಕ್ಕಾಗಿ ಮುಂದೂಡಲಾಗಿದೆ.
ಚೆಂಬರಿಕ ಜಿಎಲ್ಪಿ ಶಾಲೆಯ ಕಂಪೌಂಡ್ ನಿರ್ಮಿಸುವಂತೆ ಹೈಕೋರ್ಟ್ ಆದೇಶದಂತೆ ಆಯೋಗ ಚೆಮ್ನಾಡ್ ಪಂ. ಕಾರ್ಯದರ್ಶಿಗೆ ನಿರ್ದೇಶ ನೀಡಿದೆ. ಅದ್ರುಕಳಿ ಜಿಎಲ್ಪಿ ಶಾಲೆಯ ಜಮೀನನ್ನು ಒಬ್ಬ ವ್ಯಕ್ತಿಗೆ ಹಂಚಿಕೆ ಮಾಡಿರುವ ಕುರಿತಾದ ದೂರಿಗೆ ಸಂಬಂಧಿಸಿ ಜಮೀನಿನ ಸಮೀಕ್ಷೆ ನಡೆಸಿ ಶಾಲೆಗೆ ಈ ಸ್ಥಳವನ್ನು ಹಿಂತಿರುಗಿಸಿ ನೀಡಬೇಕೆಂದು ಕಾಸರಗೋಡು ತಹಶೀಲ್ದಾರ್ ವರದಿ ನೀಡಿದ್ದಾರೆ. ಸಿಟ್ಟಿಂಗ್ನಲ್ಲಿ ಕಮಿಷನರ್ ಪಿಆರ್ಒ ಎಸ್.ಸಿ. ಅಭಿಲಾಷ್, ತುಷಾರ ಮೋಹನ್, ಎಸ್. ಅರುಣ್ ಕುಮಾರ್, ಕಂದಾಯ, ಪೊಲೀಸ್, ಆರೋಗ್ಯ ಮತ್ತು ರಕ್ಷಣಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.

