ಹೈದರಾಬಾದ್: ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಜಾಮೀನಿನ ಮೇಲೆ ಹೊರಗೆ ಬಂದು ಸಂತ್ರಸ್ತ ಬಾಲಕಿ ಸೇರಿ ಆರು ಜನರನ್ನು ಕೊಂದಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಆರೋಪದ ಮೇಲೆ ಮೇ ತಿಂಗಳಲ್ಲಿ ಆಕೆಯ ಕುಟುಂಬ 35 ವರ್ಷದ ಪಿ.ರಾಜ್ಕುಮಾರ್ ಎಂಬ ವ್ಯಕ್ತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.
ತನ್ನ ವಿರುದ್ಧ ದೂರು ನೀಡಿದ್ದಕ್ಕಾಗಿ ತೀವ್ರ ವಿಚಲಿತನಾಗಿದ್ದ ಆತ ಜಾಮೀನು ಪಡೆದು ಹೊರಗೆ ಬಂದು ಸಂತ್ರಸ್ತ ಬಾಲಕಿ, ಆಕೆಯ ತಾಯಿ ಮತ್ತು ಅಜ್ಜಿಯನ್ನು ಕೊಂದಿದ್ದಾನೆ. ನಂತರ ಶುಕ್ರವಾರ ರಾತ್ರಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನೂ ಹತ್ನೆಗೈದಿದ್ದಾನೆ..ಈ ಸಂಬಂಧ ಆತನ ಪೋಷಕರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿಯು ಸಂತ್ರಸ್ತರಿಗೆ ಚುಚ್ಚಲು ಮತ್ತು ಕುತ್ತಿಗೆ ಸೀಳಲು ಚಾಕು ಮತ್ತು ಕುಡುಗೋಲನ್ನು ಬಳಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆತ ತನ್ನ ಕುಟುಂಬವನ್ನೂ ಕೊಂದಿದ್ದೇಕೆ ಎಂಬ ಬಗ್ಗೆ ತನಿಖೆ ಬಳಿಕ ಉತ್ತರ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಆ ಪಾಪಿ ಬಾಲಕಿ ಮತ್ತು ನನ್ನ ಚಿಕ್ಕಮ್ಮನ್ನೂ ಕೊಂದಿದ್ದಾನೆ. ಬಾಲಕಿಗೆ ಕಿರುಕುಳ ನೀಡಿದ್ದ ಆತನ ವಿರುದ್ಧ ಪೋಕ್ಸೊ ಅಡಿ ಪ್ರಕರಣ ದಾಖಲಿಸಿದ್ದೆವು. ಒಂದೆರಡು ವಾರದಲ್ಲಿ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಹೇಳಿದ್ದ' ಎಂದು ಬಾಲಕಿಯ ಸಂಬಂಧಿ ನರೇಶ್ ಹೇಳಿದ್ದಾರೆ
ಬಂಧನಕ್ಕೊಳಗಾದ ಎರಡೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಅಧಿಕಾರಿಗಳಿಗೆ ಆತ ಲಂಚ ನೀಡಿದ್ದಾನೆ. ಪ್ರಕರಣವನ್ನು ಮೂಲೆಗೆ ಹಾಕಲಾಗಿದೆ. ಪೊಲೀಸರ ಬೇಜವಾಬ್ದಾರಿಯಿಂದ ಬಾಲಕಿ ಮತ್ತು ಅವಳ ಸಂಪೂರ್ಣ ಕುಟುಂಬ ಹತ್ಯೆಯಾಗಿದೆ ಎಂದು ದೂರಿದ್ದಾರೆ.

