ನವದೆಹಲಿ: ಪ್ರಾಚೀನ ಬೌದ್ಧ ತಾಣವಾದ ಉತ್ತರ ಪ್ರದೇಶದ 'ಸಾರನಾಥ' ಈಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಸಾಲಿಗೆ ಸೇರ್ಪಡೆಯಾಗಿದೆ. ಈ ಗೌರವ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಕ್ಷಣ ಎಂದು ಬಣ್ಣಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, 'ಸಾರನಾಥಕ್ಕೂ ಭಗವಾನ್ ಬುದ್ಧನಿಗೂ ನಿಕಟ ಸಂಬಂಧವಿದೆ. ಬುದ್ಧನ ಜ್ಞಾನ, ಕರುಣೆ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶಗಳು ಇಂದಿಗೂ ಜಗತ್ತಿಗೆ ಸ್ಪೂರ್ತಿ ನೀಡುತ್ತಿವೆ' ಎಂದಿದ್ದಾರೆ.
ಈ ಗೌರವವು ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಸಿಕ್ಕ ಮನ್ನಣೆ. ಇದರಿಂದಾಗಿ ಪ್ರಪಂಚದಾದ್ಯಂತ ಇರುವ ಜನರು ಸಾರನಾಥಕ್ಕೆ ಬಂದು ಭಗವಾನ್ ಬುದ್ಧನ ವಿಚಾರಗಳನ್ನು ತಿಳಿದುಕೊಳ್ಳಲು ಮತ್ತು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ, ಇದು ಭಾರತದ ಸಂಸ್ಕೃತಿಗೆ ಸಿಕ್ಕ ಐತಿಹಾಸಿಕ ಗೌರವ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, 'ಸಾರನಾಥವು ಶಾಂತಿ ಮತ್ತು ಕರುಣೆಯ ಸಂಕೇತವಾಗಿದೆ. ಮಾನವಕುಲಕ್ಕೆ ಭಾರತೀಯ ನಾಗರಿಕತೆ ನೀಡಿದ ಕೊಡುಗೆ ಎಷ್ಟು ದೊಡ್ಡವು ಎಂಬುದನ್ನು ಇದು ಬಿಂಬಿಸುತ್ತದೆ' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿರುವ ತಾಜ್ ಮಹಲ್(1983), ಆಗ್ರಾ ಕೋಟೆ (1983) ಮತ್ತು ಫತೇಪುರ್ ಸಿಕ್ರಿ ಕೋಟೆ (1986)ಈಗಾಗಲೇ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.

