ನವದೆಹಲಿ: ಜಪಾನ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಗೆ ಜಪಾನ್ ಪ್ರಧಾನಿ ಸನೇ ತಕೈಚಿ ಬೆಂಬಲ ವ್ಯಕ್ತಪಡಿಸಿದ ಕೆಲ ದಿನಗಳ ಬೆನ್ನಲ್ಲೇ ಈ ಯೋಜನೆ ಬಗ್ಗೆ ಜಪಾನ್ನ ಮಾಜಿ ಸಚಿವರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದು, ವಿಳಂಬಕ್ಕೆ ಭಾರತದ ಧೋರಣೆಯೇ ಕಾರಣ ಎಂದು ದೂರಿದ್ದಾರೆ.
ಯೋಜನೆ ವಿಳಂಬವಾಗಲು ಭಾರತದ ಅಜಾಗರೂಕತೆಯೇ ಕಾರಣ ಎಂದಿರುವ ಜಪಾನ್ನ ಮಾಜಿ ಕಾನೂನು ಸಚಿವ ಹಿಡೆಕಿ ಮಕಿಹಾರ, ಎಕ್ಸ್ ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ.
'ಭಾರತದಲ್ಲಿನ ಶಿಂಕನ್ಸೆನ್ (ಬುಲೆಟ್ ರೈಲು) ಯೋಜನೆಯಲ್ಲಿ ನಾನೂ ಭಾಗಿಯಾಗಿದ್ದೆ. ಆದರೆ, ಅಂತರರಾಷ್ಟ್ರೀಯ ಸಭೆಗಳು ಮತ್ತು ಮಾತುಕತೆಗಳಲ್ಲಿ ಭಾರತೀಯರ ಕಡೆಯಿಂದ ಪದೇ ಪದೇ ತೀವ್ರವಾದ ಬೇಜವಾಬ್ದಾರಿ ಕಂಡುಬಂದಿತ್ತು. ವಿವೇಚನಾರಹಿತ ನಡವಳಿಕೆ ತೋರುತ್ತಿದ್ದ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿರಲಿಲ್ಲ. ಕೆಲವೇ ಸಮಯದಲ್ಲಿ ಉಲ್ಟಾ ಹೊಡೆಯುತ್ತಿದ್ದರು'ಎಂದು ಆರೋಪಿಸಿದ್ದಾರೆ.
'ಜವಾಬ್ದಾರಿಯುತ ಹುದ್ದೆಯಲ್ಲಿದ್ದ ಸಚಿವರ ವರ್ತನೆಯೂ ಅತ್ಯಂತ ಕಳಪೆಯಾಗಿತ್ತು' ಎಂದು ಮಕಿಹಾರ ಟೀಕಿಸಿದ್ದಾರೆ.
'ಚರ್ಚೆಯ ಕೊನೆಯ ಕ್ಷಣದವರೆಗೂ ಅಧಿಕಾರಿಗಳು ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲೇ ಪ್ರಯತ್ನಿಸುತ್ತಿದ್ದರು. ಅದರಲ್ಲೂ ಸಂಬಂಧಪಟ್ಟ ಸಚಿವರ ವರ್ತನೆ ತೀರಾ ಕಳಪೆಯಾಗಿತ್ತು. ಉನ್ನತ ಹುದ್ದೆಯಲ್ಲಿರುವವರೇ ಹೀಗಿದ್ದಾಗ, ಅವರೊಂದಿಗೆ ಯಾವುದೇ ರೀತಿಯ ಸೂಕ್ತ ವ್ಯವಹಾರ ನಡೆಸಲು ಸಾಧ್ಯವೇ ಇಲ್ಲ' ಎಂದಿದ್ದಾರೆ.
'ಈ ಯೋಜನೆಗಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆದ ಜಪಾನಿನ ಜನರ ಗೌರವದ ಸಲುವಾಗಿ ನಾನು ಇದನ್ನು ಹೇಳಲೇಬೇಕಿದೆ. ಈ ಯೋಜನೆ ವಿಳಂಬವಾಗಿರುವುದಕ್ಕೆ ನೂರಕ್ಕೆ ನೂರರಷ್ಟು ಕಾರಣ ಭಾರತದ ಕಡೆಯವರೇ ಎಂದು ನನಗೆ ಖಾತ್ರಿ ಇದೆ' ಎಂದಿದ್ಧಾರೆ.
ಪ್ರಧಾನಿ ಟಕೈಚಿ ಅವರ ಭೇಟಿಯಿಂದಲೂ ಯಾವುದೇ ಫಲಿತಾಂಶ ಸಿಗಲಿಲ್ಲ. ಭಾರತದ ಶಿಂಕನ್ಸೆನ್' ಯೋಜನೆಗೆ ಹಿನ್ನಡೆಯಾಗಿದ್ದು. ಸುರಕ್ಷತೆಯ ಪ್ರಮುಖ ಅಂಶವಾದ ಸಿಗ್ನಲ್ ವ್ಯವಸ್ಥೆಯಿಂದ ಜಪಾನ್ಗೆ ಕೊಕ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತವು ತನ್ನ ಮೊದಲ ಬುಲೆಟ್ ರೈಲು ಸೇವೆಯ ಮೊದಲ ಹಂತದ ಕಾರ್ಯಾಚರಣೆಯನ್ನು 2027ರ ಆಗಸ್ಟ್ 15ರಿಂದ ಆರಂಭಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಈ ಹೈಸ್ಪೀಡ್ ರೈಲು ಕಾರಿಡಾರ್ ಹಂತ ಹಂತವಾಗಿ ಕಾರ್ಯಾರಂಭ ಮಾಡಲಿದ್ದು, ಸೂರತ್-ಬಿಲಿಮೋರಾ ಮಾರ್ಗದೊಂದಿಗೆ ಆರಂಭವಾಗಲಿದೆ ಎಂದೂ ವೈಷ್ಣವ್ ತಿಳಿಸಿದ್ದಾರೆ.

