ನವದೆಹಲಿ: ದಿಲ್ಜಿತ್ ದೋಸಂಜ್ ಅಭಿನಯದ 'ಸತ್ಲುಜ್' ಸಿನಿಮಾದ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯು, ಆನ್ಲೈನ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ (ಒಟಿಟಿ) ಚಿತ್ರದ ಪ್ರಸಾರವನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.
ಈ ಚಿತ್ರವು ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಗೆ ಧಕ್ಕೆ ತರುತ್ತದೆ ಎಂದು ಸಮಿತಿ ಆರೋಪಿಸಿದೆ ಎಂದು ಮೂಲಗಳು ತಿಳಿಸಿವೆ.
ಹನಿ ಟ್ರೆಹಾನ್ ನಿರ್ದೇಶನದ 'ಸತ್ಲುಜ್' ಚಿತ್ರವು ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನಾಧರಿತವಾಗಿದೆ. ಖಾಲ್ರಾ ಅವರು 1984ರಿಂದ 1994ರವರೆಗೆ ಪಂಜಾಬ್ನಲ್ಲಿ ಗುರುತಿಸಲಾಗದ ಸಾವಿರಾರು ಶವಗಳ ಅಂತ್ಯಸಂಸ್ಕಾರದ ಬಗ್ಗೆ ತನಿಖೆ ನಡೆಸಿದ್ದರು. 1995ರಲ್ಲಿ ಅಪಹರಣಕ್ಕೊಳಗಾಗಿ ಕೊಲೆಯಾಗಿದ್ದರು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭದ್ರತಾ ಕಳವಳಗಳನ್ನು ಉಲ್ಲೇಖಿಸಿದ ಬೆನ್ನಲ್ಲೇ ಜುಲೈ 3ರಂದು 'ಜೀ5' ಒಟಿಟಿಯಲ್ಲಿ ಬಿಡುಗಡೆಯಾಗಿದ್ದ 'ಸತ್ಲುಜ್' ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಜತೆಗೆ, ಚಿತ್ರದ ಪರಿಶೀಲನೆ ಮತ್ತು ಮುಂದಿನ ಕ್ರಮಗಳ ಬಗ್ಗೆ ಶಿಫಾರಸು ಮಾಡಲು ಐಟಿ ನಿಯಮ-2021ರ ಅಡಿಯಲ್ಲಿ ಸಮಿತಿಯನ್ನು ರಚಿಸಿತ್ತು.
ಈ ವಿಚಾರ ಪಂಜಾಬ್ನಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯು ಚಿತ್ರದ ಮೇಲಿನ ನಿಷೇಧ ಹಿಂಪಡೆಯುವಂತೆ ಒತ್ತಾಯಿಸಿದೆ ಮತ್ತು ಶಿರೋಮಣಿ ಅಕಾಲಿದಳವು ರಾಜ್ಯದಾದ್ಯಂತ ಈ ಚಿತ್ರವನ್ನು ಪ್ರದರ್ಶಿಸಲು ಯೋಜಿಸುತ್ತಿರುವುದಾಗಿ ಘೋಷಿಸಿದೆ.

