ಕಾಸರಗೋಡು: ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಹಾಗೂ ಜನಕಲ್ಯಾಣ ಯೋಜನೆಗಳಿಗೆ ನಿಧಿ ಮಂಜೂರು ಮಾಡುವಲ್ಲಿ ಯಾವುದೇ ಪಕ್ಷಪಾತ ತೋರದೆ ದಕ್ಷ ಆಡಳಿತಗಾರನಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.
ಅವರು ಪ್ರಧಾನಮಂತ್ರಿ ದಿವ್ಯಾಂಗ ಕೇಂದ್ರ, ವಿಕಸಿತ ಕೇರಳ, ಬಿಜೆಪಿ ಕಾಸರಗೋಡು ಜಿಲ್ಲಾ ಹೆಲ್ಪ್ ಡೆಸ್ಕ್ ಮತ್ತು ಬಿಜೆಪಿ ವೆಳ್ಳರಿಕ್ಕುಂಡ್ ಮಂಡಲ ಸಮಿತಿಯ ಜಂಟಿ ಆಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ಆಯೋಜಿಸಲಾಗಿದ್ದ 'ರಾಷ್ಟ್ರೀಯ ವಯೋಶ್ರೀ ಯೋಜನೆ' ಸ್ಕ್ರೀನಿಂಗ್ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು.
ಆಯುಷ್ಮಾನ್ ಭಾರತ್ ಹಿರಿಯ ನಾಗರಿಕರ ವಿಮಾ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಕಾಲಕಾಲಕ್ಕೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಎಂ.ಎಲ್. ಅಶ್ವಿನಿ ಆಗ್ರಹಿಸಿದರು. ಬಿಜೆಪಿ ವೆಳ್ಳರಿಕ್ಕುಂಡ್ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಪನತ್ತಡಿ ಗ್ರಾಮ ಪಂಚಾಯಿತಿ ಪ್ರತಿನಿಧಿ ಕೆ.ಕೆ. ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ವೆಳ್ಳರಿಕ್ಕುಂಡ್ ಮಂಡಲ ಉಪಾಧ್ಯಕ್ಷ ಒ. ಜಯರಾಮ್, ಜಿಲ್ಲಾ ಸಮಿತಿ ಸದಸ್ಯ ಸೂರ್ಯನಾರಾಯಣ ಭಟ್, ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಪನತ್ತಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ. ಶಿಬು ಪಾಣತ್ತೂರ್, ಭವ್ಯಾ ಜಯರಾಜ್, ರಜನಿ ದೇವಿ, ದಿವ್ಯಾಂಗ ಕೇಂದ್ರದ ಪ್ರತಿನಿಧಿ ಡಾ. ಗೋಕುಲ್, ಅವಿನಾಶ್, ಆಡಿಯೊಲಾಜಿಸ್ಟ್ ಡಾ. ಆಶಿಷ್, ವಿಕಸಿತ ಕೇರಳ ಹೆಲ್ಪ್ ಡೆಸ್ಕ್ ಪ್ರತಿನಿಧಿ ವಿಘ್ನೇಶ್ ಉಪಸ್ಥಿತರಿದ್ದರು.



