ಕಾಸರಗೋಡು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನ ಬಳಸಿ 2ಕೋಟಿ ರೂ.ವೆಚ್ಚದಲ್ಲಿ ಬದಿಯಡ್ಕದಲ್ಲಿ ಡಾ. ಕಯ್ಯಾರ ಕಿಞಣ್ಣ ರೈ ಹೆಸರಲ್ಲಿ ನಿರ್ಮಿಸಿರುವ ಕನ್ನಡ ಭವನದ ಉದ್ಘಾಟನೆಗೆ ಕೇರಳದ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರಿಗೆ ತಿರುವನಂತಪುರದಲ್ಲಿ ಬುಧವಾರ ಅಧಿಕೃತ ಆಹ್ವಾನ ನೀಡಲಾಯಿತು. ಇದರೊಂದಿಗೆ ಕಾಸರಗೋಡು ಕನ್ನಡಿಗರ ವಿವಿಧ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಮನವಿ ಸಲ್ಲಿಸಲಾಯಿತು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಲಾಯಿತು.
ಕರ್ನಾಟಕದ ಮುಖ್ಯಮಂತ್ರಿ ಜತೆ ಚರ್ಚಿಸಿ ಇಬ್ಬರೂ ಸಿಎಂಗಳಿಗೆ ಅನುಕೂಲವಗುವ ರೀತಿಯಲ್ಲಿ ದಿನಾಂಕ ನಿಗದಿಪಡಿಸಲಾಗುವುದು. ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ವಿ.ಡಿ ಸತೀಶನ್ ಭರವಸೆ ನೀಡಿದರು. ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಯಣ ತೊಟ್ಟೆತ್ತೋಡಿ, ಪ್ರಾಧಿಕಾರ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ, ಡಾ. ಪ್ರಸನ್ನ ರೈ, ಮಾಹಿನ್ ಕೇಳೋಟ್, ಡಾ. ಮಲ್ಲಿಕಾರ್ಜುನ ನಾಸಿ, ಶರೀನ್ ಮಹಮ್ಮದ್, ಜೆಡ್.ಎ ಕಯ್ಯಾರ್ ಉಪಸ್ಥಿತರಿದ್ದರು.
ಈ ಸಂದರ್ಭ ಮಲೆಯಾಳಿ ಭಾಷಾ ಬಿಲ್-2025ರ ಕಾಯ್ದೆಯಿಂದ ಕಾಸರಗೋಡನ್ನು ಹೊರತುಪಡಿಸಬೇಕು, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು, ಕೇರಳದ ನೇಮಕಾತಿಗಳಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ನಿಯಮಾನುಸಾರ ಮೀಸಲಾತಿ ಸೌಲಭ್ಯ ಒದಗಿಸಬೇಕು, ರೇಶನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳಲ್ಲಿ ಕನ್ನಡ ಭಾಷೆ ಅಳವಡಿಸಬೇಕು, ಕಾಸರಗೋಡು ಜಿಲ್ಲೆಯ ಶಾಲೆಗಳಿಗೆ ಕಡ್ಡಾಯವಾಗಿ ಕನ್ನಡ ಶಿಕ್ಷಕರ ನೇಮಕಮಾಡಬೇಕು ಮುಂತಾದ ಬೇಡಿಕೆಯುಳ್ಳ ಮನವಿಯನ್ನೂ ಮುಖ್ಯಮಂತ್ರಿಗೆ ಸಮರ್ಪಿಸಲಾಯಿತು.



