ಲಖನೌ: ಅಯೋಧ್ಯೆ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಆರೋಪದ ಬೆನ್ನಲ್ಲೇ ಮತ್ತೊಂದು ವಿಚಾರ ಹೊರಬಿದ್ದಿದೆ.
ಈ ಪ್ರಕರಣದ ಆರೋಪಿಗಳು ಕೇವಲ ದೇವಸ್ಥಾನದ ದೇಣಿಗೆ ಹಣವನ್ನು ಲಪಟಾಯಿಸಿದ್ದು ಮಾತ್ರವಲ್ಲದೆ, 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ಹೆಸರಿನಲ್ಲಿ ನಕಲಿ ರಶೀದಿಗಳನ್ನು ಸೃಷ್ಟಿಸಿ ಭಕ್ತರಿಂದ ಹಣ ವಸೂಲಿ ಮಾಡಿರುವುದು ಬಹಿರಂಗಗೊಂಡಿದೆ.
ಬಂಧಿತ ಆರೋಪಿಗಳಾದ ಟಿನ್ನು ಯಾದವ್, ಲವಕುಶ್, ಕರುಣೇಶ್, ಅನುಕಲ್ಪ್ ಮತ್ತು ಇತರರಿಂದ ಹಳೆಯ ನಕಲಿ ರಶೀದಿ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳು ಟ್ರಸ್ಟ್ನ ಅಸಲಿ ರಶೀದಿಗಳಂತೆಯೇ ಕಾಣಿಸುತ್ತಿದ್ದು, ಟ್ರಸ್ಟ್ನ ಅಧಿಕೃತ ಲೋಗೊವನ್ನು ಹೊಂದಿದ್ದವು. ನಗದು ರೂಪದಲ್ಲಿ ದೇಣಿಗೆ ನೀಡಲು ಬಯಸುತ್ತಿದ್ದ ಭಕ್ತರನ್ನು ಸಂಪರ್ಕಿಸಿ ಈ ನಕಲಿ ರಶೀದಿಗಳನ್ನು ನೀಡಿ ಆರೋಪಿಗಳು ಹಣ ದೋಚುತ್ತಿದ್ದರು.
ಟ್ರಸ್ಟ್ ಹಳೆಯ ರಶೀದಿ ವ್ಯವಸ್ಥೆಯನ್ನು ರದ್ದುಗೊಳಿಸಿದ ನಂತರ ಆರೋಪಿಗಳು ಈ ದಂಧೆಯನ್ನು ನಿಲ್ಲಿಸಬೇಕಾಯಿತು. ಪ್ರಸ್ತುತ ಭಕ್ತರು ನೇರವಾಗಿ ಟ್ರಸ್ಟ್ನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತಿದ್ದು ಅಥವಾ ಮಂದಿರದ ಆವರಣದಲ್ಲಿರುವ ಅಧಿಕೃತ ಕೌಂಟರ್ಗಳ ಮೂಲಕ ದೇಣಿಗೆ ನೀಡಿ ತಕ್ಷಣವೇ ಆನ್ಲೈನ್ ರಶೀದಿಗಳನ್ನು ಪಡೆಯುತ್ತಿದ್ದಾರೆ.
ಈ ಮಧ್ಯೆ, ರಾಮಮಂದಿರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಅಯೋಧ್ಯೆಯ ವಕೀಲರು ಬುಧವಾರ ಎಚ್ಚರಿಕೆ ನೀಡಿದ್ದಾರೆ. ವಕೀಲರು ಈಗಾಗಲೇ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
'ಪ್ರಸ್ತುತ ನಡೆಯುತ್ತಿರುವ ಪೊಲೀಸ್ ತನಿಖೆ ಮತ್ತು ಎಸ್ಐಟಿ ತನಿಖೆಯು ಅಸಲಿ ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನವಾಗಿದೆ. ಈ ತನಿಖೆಯು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಪೊಲೀಸರಿಗೆ ಬೇಕಾಗಿರುವುದು ಕೂಡ ಇದನ್ನೇ' ಎಂದು ಅಯೋಧ್ಯೆಯ ವಕೀಲರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಬದರಿನಾಥ ಕಾಣಿಕೆ ಅಕ್ರಮ: ಅಮಾನತಾದ ಸಿಬ್ಬಂದಿ ವಿರುದ್ಧ ಎಫ್ಐಆರ್ಎದೆಮಟ್ಟಕ್ಕೆ ನಿಂತಿದ್ದ ನೀರು: ಗರ್ಭಿಣಿ ಸಾಗಿಸಲು ಮರದ ಬಾಗಿಲೇ ಸ್ಟ್ರೆಚರ್
ರಾಮಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಂಟು ಜನ ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ಯಾವುದೇ ವಕೀಲರು ವಾದ ಮಂಡಿಸಬಾರದು ಎಂದು ಅಯೋಧ್ಯೆ ಬಾರ್ ಅಸೋಸಿಯೇಷನ್ ನಿರ್ಧರಿಸಿದೆ.
ಅಸೋಸಿಯೇಷನ್ ಅಧ್ಯಕ್ಷ ಕಾಲಿಕಾ ಪ್ರಸಾದ್ ಮಿಶ್ರಾ ಮಾತನಾಡಿ, 'ಯಾರಾದರೂ ಈ ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾದರೆ ಅವರಿಗೆ ₹5 ಲಕ್ಷ ದಂಡ ವಿಧಿಸಲಾಗುವುದು. ಅಲ್ಲದೆ ಅವರು ಬಾರ್ ಅಸೋಸಿಯೇಷನ್ನ ಸದಸ್ಯತ್ವವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

