ನವದೆಹಲಿ; ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿರುವ ದೇಣಿಗೆ ದುರುಪಯೋಗ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಶುಕ್ರವಾರ ಪುನರುಚ್ಚರಿಸಿರುವ ಸಿಪಿಐ, ಈ ವಿಷಯದ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮೌನಕ್ಕೆ ಜಾರಿದೆ ಎಂದು ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಇದರ ಹೊಣೆಗಾರಿಕೆಯನ್ನು ಹೊರಬೇಕು ಎಂದೂ ಅದು ಆಗ್ರಹಿಸಿದೆ.
ಜುಲೈ 20ರಿಂದ ಪ್ರಾರಂಭಗೊಳ್ಳಲಿರುವ ಲೋಕಸಭಾ ಮಳೆಗಾಲದ ಅಧಿವೇಶನಕ್ಕೂ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಕೇಂದ್ರ ಸರಕಾರ ಜನರ ವಿಶ್ವಾಸಕ್ಕೆ ದ್ರೋಹವೆಸಗಿದೆ ಹಾಗೂ ರಾಜೀನಾಮೆಗಳು ಮಾತ್ರ ಸಾಕಾಗುವುದಿಲ್ಲ ಎಂದು ಹೇಳಿದರು.
"ವಾಸ್ತವವಾಗಿ ಟ್ರಸ್ಟ್ ತನಗೆ ತಾನೇ ಕಳಂಕ ಹಚ್ಚಿಕೊಂಡಿದೆ. ಜನರ ನಂಬಿಕೆಗೆ ಟ್ರಸ್ಟ್ ದ್ರೋಹವೆಸಗಿದೆ. ಇದೀಗ ಟ್ರಸ್ಟ್ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಆದರೆ, ಮೋದಿ ಮೌನ ವಹಿಸಿದ್ದಾರೆ. ಅವರು ಈವರೆಗೆ ಒಂದು ಮಾತನ್ನೂ ಆಡಿಲ್ಲ. ಈ ವಿಷಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಮಾತನಾಡಿಲ್ಲ" ಎಂದು ಅವರು ಟೀಕಿಸಿದರು.
2024ರ ಒಡಿಶಾ ವಿಧಾನಸಭಾ ಚುನಾವಣೆಯ ವೇಳೆ ಜಗನ್ನಾಥ ದೇವಾಲಯದ ರತ್ನ ಭಂಡಾರದಲ್ಲಿ ನಡೆದಿದ್ದ ಕಳವಿನ ಕುರಿತು ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಇದೀಗ ಪ್ರಧಾನಿಯೇಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
"ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣದ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ನಮ್ಮ ಪಕ್ಷ ಆರಂಭದಿಂದಲೂ ಆಗ್ರಹಿಸುತ್ತಾ ಬಂದಿದೆ. ತನಿಖೆ ಸಂಪೂರ್ಣವಾಗಿ ಪಾರದರ್ಶಕರಾಗಿರಬೇಕು ಹಾಗೂ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗಕೂಡದು. ರಾಜೀನಾಮೆಗಳು ಇದಕ್ಕೆ ಉತ್ತರವಲ್ಲ" ಎಂದು ಅವರು ಆಗ್ರಹಿಸಿದರು.

