ನವದೆಹಲಿ; ಶೇ. 20ರಷ್ಟು ಎಥನಾಲ್ ಮಿಶ್ರಿತ ಇ-20 ಪೆಟ್ರೋಲ್ ಬಳಕೆಯಿಂದ ಕೆಲವು ವಾಹನಗಳ ಇಂಧನ ಕ್ಷಮತೆ (ಮೈಲೇಜ್) ಶೇ. 3.5ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ.
ಆದರೆ, ಹೆಚ್ಚಿನ ಆಕ್ಟೇನ್ ಮಟ್ಟ, ಕ್ಷಿಪ್ರ ದಹನ, ಸುಗಮ ವೇಗವರ್ಧನೆ, ಉತ್ತಮ ಕಾರ್ಯಕ್ಷಮತೆ, ಸ್ವಚ್ಛ ಇಂಜಿನ್ ಕಾರ್ಯಾಚರಣೆ ಹಾಗೂ ಕಡಿಮೆ ಇಂಗಾಲ ಉಗುಳುವಿಕೆ ಸೇರಿದಂತೆ ಇ-20 ಪೆಟ್ರೋಲ್ ನಿಂದ ದೊರೆಯುವ ಇತರ ಪ್ರಯೋಜನಗಳ ಮುಂದೆ ಈ ಪ್ರತಿಕೂಲ ಪರಿಣಾಮವು ನಗಣ್ಯವಾಗಿದೆ ಎಂದು ಸಚಿವಾಲಯ ಹೇಳಿದೆ.
ಎಥನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಸ್ತೃತ ಪ್ರಶ್ನೋತ್ತರ (ಎಫ್ಎಕ್ಯೂ) ದಾಖಲೆಯನ್ನು ಬಿಡುಗಡೆ ಮಾಡಿರುವ ಸಚಿವಾಲಯ, 'ಇ-10 ಅಥವಾ ಸಾಂಪ್ರದಾಯಿಕ ಪೆಟ್ರೋಲ್ಗೆ ಹೋಲಿಸಿದರೆ ಇ-20 ಪೆಟ್ರೋಲ್ ಹೆಚ್ಚು ಶುದ್ಧ, ಉನ್ನತ ಗುಣಮಟ್ಟದ ಹಾಗೂ ಅಧಿಕ ದಕ್ಷತೆಯ ಇಂಧನವಾಗಿದೆ' ಎಂದು ಸಮರ್ಥಿಸಿಕೊಂಡಿದೆ.
ಹಲವು ವರ್ಷಗಳ ವೈಜ್ಞಾನಿಕ ಅಧ್ಯಯನ, ವಾಹನ ತಯಾರಕರೊಂದಿಗೆ ನಡೆಸಿದ ಸಮಾಲೋಚನೆ ಹಾಗೂ ದೇಶೀಯ ಎಥನಾಲ್ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಇ-20 ಪೆಟ್ರೋಲ್ ಅನ್ನು ಪರಿಚಯಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇ-20 ಕಾರ್ಯಕ್ರಮವನ್ನು ತರಾತುರಿಯಲ್ಲಿ ಜಾರಿಗೊಳಿಸಲಾಗಿದೆ ಎಂಬ ಟೀಕೆಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ಭಾರತದ ಎಥನಾಲ್ ಮಿಶ್ರಣ ಕಾರ್ಯಕ್ರಮವು 2001ರಲ್ಲೇ ಪ್ರಾಯೋಗಿಕ ಯೋಜನೆಯೊಂದಿಗೆ ಆರಂಭಗೊಂಡಿತ್ತು ಎಂದು ಹೇಳಿದೆ. 2006ರೊಳಗೆ ದೇಶದ ಆಯ್ದ ನಗರಗಳಲ್ಲಿ ಶೇ. 5ರಷ್ಟು ಎಥನಾಲ್ ಮಿಶ್ರಣದ ಗುರಿಯನ್ನು ಆಗಲೇ ನಿಗದಿಪಡಿಸಲಾಗಿತ್ತು ಎಂದು ವಿವರಿಸಿದೆ.
2014ರವರೆಗೆ ದೇಶದಲ್ಲಿ ಎಥನಾಲ್ ಮಿಶ್ರಣ ಪ್ರಮಾಣವು ಶೇ. 1.5ರಷ್ಟೇ ಇತ್ತು. ಬಳಿಕ 2018ರಲ್ಲಿ ರಾಷ್ಟ್ರೀಯ ಜೈವಿಕ ಇಂಧನ ನೀತಿಯನ್ನು ಜಾರಿಗೆ ತಂದ ನಂತರ ಕಾರ್ಯಕ್ರಮಕ್ಕೆ ವೇಗ ದೊರೆಯಿತು. ಕಬ್ಬು ಮಾತ್ರವಲ್ಲದೆ ವಿವಿಧ ಆಹಾರ ಧಾನ್ಯಗಳು ಹಾಗೂ ಇತರ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಎಥನಾಲ್ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿತು ಎಂದು ಸಚಿವಾಲಯ ತಿಳಿಸಿದೆ.
ಇದೇ ವೇಳೆ, ಎಥನಾಲ್ ಮಿಶ್ರಣ ಕಾರ್ಯಕ್ರಮವು ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ರೈತರಿಗೆ ಹೆಚ್ಚುವರಿ ಆದಾಯದ ಮೂಲ ಕಲ್ಪಿಸುವುದು, ದೇಶೀಯ ಜೈವಿಕ ಇಂಧನ ಉತ್ಪಾದನೆಯನ್ನು ಉತ್ತೇಜಿಸುವುದು ಹಾಗೂ ಇಂಗಾಲ ಉಗುಳುವಿಕೆಯನ್ನು ತಗ್ಗಿಸುವ ಉದ್ದೇಶದಿಂದ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

