ದುಬೈ: ಹಡಗೊಂದರ ಮೇಲೆ ಒಮಾನ್ ಕರಾವಳಿಯಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟ ಭಾರತೀಯ ನಾವಿಕನ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವ ಸಲುವಾಗಿ ಯುಎಇ ಅಧಿಕಾರಿಗಳು ಮತ್ತು ಹಡಗಿನ ಕಂಪನಿಯ ಜೊತೆ ಭಾರತೀಯ ಅಧಿಕಾರಿಗಳು ನಿಕಟ ಮಾತುಕತೆ ನಡೆಸುತ್ತಿದ್ದಾರೆ ಎಂದು ದುಬೈನಲ್ಲಿರುವ ಭಾರತದ ರಾಯಭಾರ ಕಚೇರಿ ಬುಧವಾರ ಹೇಳಿದೆ.
'ಎಂವಿ ಜಿಎಫ್ಎಸ್ ಗ್ಯಾಲಾಕ್ಸಿ ಹಡಗಿನ ಮೇಲೆ ಭಾನುವಾರ ನಡೆದ ದಾಳಿಯಲ್ಲಿ ಭಾರತೀಯರೊಬ್ಬರು ಮೃತಪಟ್ಟಿರುವುದಕ್ಕೆ ಸಂತಾಪ ವ್ಯಕ್ತಪಡಿಸುತ್ತೇವೆ' ಎಂದು ಕಾನ್ಸುಲೇಟ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಸೈಪ್ರಸ್ ಧ್ವಜ ಹೊಂದಿದ್ದ ಹಡಗಿನ ಮೇಲೆ ನಡೆದ ದಾಳಿಯಿಂದಾಗಿ ಅದರಲ್ಲಿದ್ದ 11 ಭಾರತೀಯ ನಾವಿಕರು ನಾಪತ್ತೆಯಾಗಿದ್ದರು. 10 ಮಂದಿಯ ರಕ್ಷಣೆ ಮಾಡಲಾಗಿತ್ತು. ಪುಣೆ ಮೂಲದ ಹೇರಂಬ್ ಕರಮರ್ಕರ್(30) ಎಂಬವರು ಮೃತಪಟ್ಟಿದ್ದಾರೆ.
'ಕರಮರ್ಕರ್ ಅವರು ನಾಪತ್ತೆಯಾದ 60 ಗಂಟೆ ಬಳಿಕ ಒಮಾನ್ ಕರಾವಳಿ ಪಡೆಯು ಅವರ ಮೃತದೇಹವನ್ನು ಪತ್ತೆ ಮಾಡಿದೆ ಎಂದು ಹಡಗಿನ ಕಂಪನಿಯು ಅವರ ಕುಟುಂಬಸ್ಥರಿಗೆ ಮಂಗಳವಾರ ಮಾಹಿತಿ ನೀಡಿದೆ' ಎಂದು 'ಗಲ್ಫ್ ನ್ಯೂಸ್' ವರದಿ ಮಾಡಿದೆ.
'ನಾವೀಗ ಒಮಾನ್ ನೌಕಾಪಡೆಯ ಜೊತೆಗಿದ್ದೇವೆ. ಮಗನ ಪಾರ್ಥಿವ ಶರೀರಕ್ಕಾಗಿ ಕಾಯುತ್ತಿದ್ದೇವೆ. ಅವನು ಕಳೆದ ಐದು ತಿಂಗಳಿನಿಂದ ಹಡಗಿನಲ್ಲೇ ಇದ್ದ, ಶೀಘ್ರದಲ್ಲಿ ಮರಳಬೇಕಿತ್ತು' ಎಂದು ಕರಮರ್ಕರ್ ತಂದೆ ವಿವೇಕ್ ಟಂಡನ್ ಭಾವುಕರಾಗಿ ಹೇಳಿದರು.

