ಭೋಪಾಲ್: ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕುರಿತ ವಿಧೇಯಕವನ್ನು ಮಂಡಿಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.
ಇಂದೋರ್ ಜಿಲ್ಲಾ ಆಸ್ಪತ್ರೆಯ ಹೊಸ 300 ಹಾಸಿಗೆಗಳ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಯಾದವ್, ದೇಶದಲ್ಲಿ ವಿವಿಧ ಧರ್ಮಗಳ ಜನರಿಗೆ ಬೇರೆ ಬೇರೆ ಕಾನೂನುಗಳು ಇರಬಾರದು ಎಂದು ಪ್ರತಿಪಾದಿಸಿದ್ದಾರೆ.
'ಇದೇ 20ರಂದು ಮುಂಗಾರು ಅಧಿವೇಶನ ಆರಂಭವಾಗಲಿದೆ. ಯುಸಿಸಿ ಕುರಿತ ವಿಧೇಯಕವನ್ನು ಅಲ್ಲಿ ಮಂಡಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.
'ಯುಸಿಸಿ ಕುರಿತು ನಮ್ಮ ಸರ್ಕಾರ ರಚಿಸಿದ್ದ ಸಮಿತಿಯು, ರಾಜ್ಯದಾದ್ಯಂತ ಎಲ್ಲಾ ಧರ್ಮಗಳು, ವರ್ಗಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಜನರೊಂದಿಗೆ ಸಂವಾದ ನಡೆಸಿ 10 ಲಕ್ಷಕ್ಕೂ ಹೆಚ್ಚು ನಾಗರಿಕರಿಂದ ಸಲಹೆಗಳನ್ನು ಸಂಗ್ರಹಿಸಿದೆ' ಎಂದು ಮಾಹಿತಿ ನೀಡಿದ್ದಾರೆ.
'ಪ್ರಸ್ತುತ ಮದುವೆ ಮತ್ತು ಉತ್ತರಾಧಿಕಾರದಂತಹ ವಿಷಯಗಳಲ್ಲಿ ಹಿಂದೂ ಮತ್ತು ಮುಸ್ಲಿಮರಿಗೆ ವಿಭಿನ್ನ ಕಾನೂನುಗಳಿವೆ. ನಮ್ಮ ದೇಶ ಒಂದೇ ಆಗಿರುವಾಗ, ವಿವಿಧ ಧರ್ಮಗಳ ಜನರಿಗೆ ಏಕೆ ವಿಭಿನ್ನ ಕಾನೂನುಗಳು ಇರಬೇಕು? ಯುಸಿಸಿ ಜಾರಿಯಾದರೆ ರಾಮಚಂದ್ರ ಎಂಬ ಹೆಸರಿನ ವ್ಯಕ್ತಿ ಒಂದು ಮದುವೆಯಾದರೆ, ರಹೀಂ ಎಂಬ ಹೆಸರಿನ ವ್ಯಕ್ತಿಯೂ ಒಂದೇ ಮದುವೆಯಾಗುತ್ತಾನೆ' ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಕಾಂಗ್ರೆಸ್ ಇಂತಹ ವಿಷಯಗಳನ್ನು ಯಾವಾಗಲೂ ಹಿಂದೂ-ಮುಸ್ಲಿಂ ದೃಷ್ಟಿಕೋನದಿಂದ ನೋಡುತ್ತದೆ' ಎಂದು ಆರೋಪಿಸುತ್ತಾರೆ.
'ಯುಸಿಸಿ ವಿಷಯದಲ್ಲೂ ಕಾಂಗ್ರೆಸ್ ಎಂದಿನಂತೆ ದ್ವಂದ್ವ ನಿಲುವನ್ನು ತಳೆದಿದೆ. ತನ್ನ ವೋಟ್ ಬ್ಯಾಂಕ್ ರಕ್ಷಿಸಿಕೊಳ್ಳಲು ಸಮಿತಿಯ ಸಭೆಗೂ ಹಾಜರಾಗಲಿಲ್ಲ. ಯುಸಿಸಿ ಕುರಿತು ತನ್ನ ಅಭಿಪ್ರಾಯವನ್ನೂ ವ್ಯಕ್ತಪಡಿಸಲಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

