ನವದೆಹಲಿ:ಲೋಕಸಭೆಯ ಪ್ರಸಕ್ತ 543ರ ಸಂಖ್ಯಾ ಬಲವನ್ನು ಮತ್ತೆ 25 ವರ್ಷಗಳವರೆಗೆ ಕಾಯ್ದುಕೊಳ್ಳಬೇಕು ಎಂಬ ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನು ಪುನರುಚ್ಚರಿಸಿ ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಅಂಗೀಕಾರಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶನ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು ಸುಳಿವು ನೀಡಿದ ಬೆನ್ನಲ್ಲೇ ಖರ್ಗೆ ಈ ಪತ್ರ ಬರೆದಿದ್ದಾರೆ.
ಯಾವುದೇ ಅಧಿವೇಶನ ಕರೆಯುವ ಮುನ್ನ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣಾ ಪಕ್ರಿಯೆಯ ಬಗ್ಗೆ ಚರ್ಚಿಸಲು ಸರಕಾರ ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಖರ್ಗೆ ಅವರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
''ಕ್ಷೇತ್ರ ಪುನರ್ವಿಂಗಣೆ, ಸಂಸತ್ತಿನ ಮುಂಗಾರು ಅಧಿವೇಶನವನ್ನು ಮುಕ್ತಾಯಗೊಳಿಸುವಲ್ಲಿ ಆಗಿರುವ ವಿಳಂಬ ಮತ್ತು ನಿನ್ನೆ ಸಂಜೆ ದೂರದರ್ಶನ ಸಂದರ್ಶನದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು ಪ್ರಸ್ತಾವಿಸಿದ ವಿಶೇಷ ಅಧಿವೇಶನದ ಕುರಿತು ನಾನು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ'' ಎಂದು ಖರ್ಗೆ ತಿಳಿಸಿದ್ದಾರೆ.
''ಸರಕಾರದ ಕ್ಷೇತ್ರ ಪುನರ್ವಿಂಗಡಣಾ ಪ್ರಸ್ತಾವಗಳ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆಯನ್ನು ಕರೆಯುವಂತೆ ಕೋರಿ ನಾನು 2026 ಜುಲೈ 16ರಂದು ಕೊನೆಯದಾಗಿ ನಿಮಗೆ ಪತ್ರ ಬರೆದಿದ್ದೆ. ನೀವು ಚಿಂತಿಸುತ್ತಿರುವ ಯಾವುದೇ ವಿಶೇಷ ಸಂಸತ್ ಅಧಿವೇಶನದಲ್ಲಿ ಅಂತಹ ಪ್ರಸ್ತಾವಗಳನ್ನು ಮಂಡಿಸುವ ಮೊದಲು, ಎಲ್ಲಾ ರಾಜಕೀಯ ಪಕ್ಷಗಳಿಗೆ ಅವುಗಳನ್ನು ವಿವರವಾಗಿ ಅಧ್ಯಯನ ಮಾಡಲು ಸಾಕಷ್ಟು ಸಮಯ ನೀಡುವಂತೆಯೂ ನಾನು ಕೋರಿದ್ದೆ'' ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ರಾಜ್ಯವಾರು ಸಂಖ್ಯಾ ಬಲವನ್ನು ಮತ್ತೆ 25 ವರ್ಷಗಳವರೆಗೆ ಕಾಯ್ದುಕೊಳ್ಳುವಂತೆ ಮತ್ತು 2029ರ ಲೋಕಸಭಾ ಚುನಾವಣೆಯಿಂದಲೇ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಪರಿಚಯಿಸುವಂತೆಯೂ ಖರ್ಗೆ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದಾರೆ.

