ನವದೆಹಲಿ: 'ದಸರಾ, ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳ ಈ ಕಾಲದಲ್ಲಿ ಸಕ್ಕರೆ ಬೆಲೆ ಏರಿಕೆಯಾಗಿರುವುದು ಮೋದಿ ಸರ್ಕಾರದ ಹೊಸ 'ಮಾಸ್ಟರ್ಸ್ಟ್ರೋಕ್'. ದಾಸ್ತಾನುದಾರರಿಗೆ ಮತ್ತು ಕಾಳು ಸಂತೆಕೋರರಿಗೆ ₹36 ಸಾವಿರ ಕೋಟಿ ಲಾಭ ಮಾಡಿಕೊಡಲು, ಸಕ್ಕರೆ ಸಂಗ್ರಹದ ಕೊರತೆ ಇದೆ ಎಂದು ತಿಳಿದಿದ್ದರೂ ಸರ್ಕಾರ ಸುಮ್ಮನೆ ಕುಳಿತಿತ್ತು.
ಇದು ಕೇಂದ್ರದ ಸಕ್ಕರೆ ಹಗರಣ' ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.
ಮಾಧ್ಯಮಗೋಷ್ಠಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, 'ಹಬ್ಬದ ಕಾಲವಾದ್ದರಿಂದ ಆಗಸ್ಟ್ನಿಂದ ನವೆಂಬರ್ನಲ್ಲಿವರೆಗೆ ಸುಮಾರು 1.2 ಕೋಟಿ ಟನ್ ಸಕ್ಕರೆ ಬಳಕೆಯಾಗುವ ನಿರೀಕ್ಷೆ ಇದೆ. ಪ್ರತೀ ಕೆ.ಜಿ ಸಕ್ಕರೆಗೆ ಜನರು ₹30 ಹೆಚ್ಚಿಗೆ ನೀಡಬೇಕಾಗುತ್ತದೆ' ಎಂದರು.
'ವಧುಮೇಹ ತಗ್ಗಿಸಲು ಮೋದಿ ಅವರು ಸಕ್ಕರೆ ಬೆಲೆ ಏರಿಸಿ, ಪೆಟ್ರೋಲ್ ಉತ್ಪಾದನೆಗೆ ನೀಡಿದ್ದಾರೆ' ಎಂದು ಬಿಜೆಪಿ ನಾಯಕರು ಸಾರ್ವಜನಿಕರಿಗೆ ಉಪದೇಶ ಮಾಡುತ್ತಿದ್ದಾರೆ. ಈ ಪೆಟ್ರೋಲ್ ಬಳಸಿದ ಸಾರ್ವಜನಿಕರ ಕಾರುಗಳು ಗ್ಯಾರೇಜ್ಗಳಲ್ಲಿವೆ. ಜನರ ಜೇಬುಗಳು ಖಾಲಿಯಾಗುತ್ತಿವೆ' ಎಂದು ಟೀಕಿಸಿದರು.

