ನವದೆಹಲಿ: ನೇಪಾಳದ ರಸುವಾ ಜಿಲ್ಲೆಯಲ್ಲಿ ಬುಧವಾರ ಭೀಕರ ಪ್ರವಾಹದ ಬಳಿಕ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ. ಈ ನಡುವೆ ಕೈಲಾಸ ಮಾನಸ ಸರೋವರಕ್ಕೆ ತೆರಳುತ್ತಿದ್ದ ತೀರ್ಥಯಾತ್ರಿಗಳು, ತ್ರಿಶೂಲಿ 1 ವಿದ್ಯುತ್ ಯೋಜನೆಯ ಕಾರ್ಮಿಕರು, ವಿವಿಧ ರಾಜ್ಯಗಳಿಂದ ತೆರಳಿದ್ದ ಪ್ರವಾಸಿಗಳು ಸೇರಿದಂತೆ ಹಲವಾರು ಭಾರತೀಯ ಪ್ರಜೆಗಳ ಗುಂಪು ಸಂಪರ್ಕಕ್ಕೆ ಸಿಗುತ್ತಿಲ್ಲ.
ಈವರೆಗೆ 21 ಭಾರತೀಯರನ್ನು ರಕ್ಷಿಸಲಾಗಿದ್ದು ಇತರರಿಗಾಗಿ ಶೋಧ ಕಾರ್ಯಗಳು ಮುಂದುವರಿದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರನ್ನು ಪತ್ತೆ ಹಚ್ಚಲು ಮತ್ತು ಕಾಣೆಯಾಗಿರುವ ಭಾರತೀಯರೊಂದಿಗೆ ಸಂಪರ್ಕ ಸಾಧಿಸಲು ಸರಕಾರವು ನೇಪಾಳದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದರು.
ಸಂಪರ್ಕಕ್ಕೆ ಸಿಗದ 288 ಭಾರತೀಯರಲ್ಲಿ ತ್ರಿಶೂಲಿ 1 ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 73 ಭಾರತೀಯರು ಸೇರಿದ್ದಾರೆ. ಕಾರ್ಮಿಕರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕಾಠ್ಮಂಡುವಿನಲ್ಲಿರುವ ಭಾರತೀಯ ದೂತಾವಾಸವು ಯೋಜನೆಯ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ ಜೈಸ್ವಾಲ್, ದುರಂತದ ಬಳಿಕ ಸಂವಹನ ಜಾಲಗಳು ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ ಆ ಪ್ರದೇಶದೊಂದಿಗೆ ಸಂಪರ್ಕ ಸಾಧಿಸುವುದು ಕಷ್ಟಕರವಾಗಿದೆ ಎಂದು ಹೇಳಿದರು.
ತಮಿಳುನಾಡಿನಿಂದ ತೆರಳಿದ್ದ 37 ಮತ್ತು 49 ಜನರ ಎರಡು ದೊಡ್ಡ ಗುಂಪುಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಸಾಮ್ರಾಟ್ ಟ್ರಾವೆಲ್ಸ್ ಮತ್ತು ಫ್ಲೈ ಎವರೆಸ್ಟ್ ಟ್ರಾವೆಲ್ಸ್ ಏಜೆನ್ಸಿಗಳ ಮೂಲಕ ಯಾತ್ರೆಗೆ ತೆರಳಿದ್ದರು.
ಸಾಮ್ರಾಟ್ ಟ್ರಾವೆಲ್ಸ್ ನೆರವಿನಿಂದ ಪ್ರಯಾಣ ಬೆಳೆಸಿದ್ದ ಪಶ್ಚಿಮ ಬಂಗಾಳದ 32 ಭಾರತೀಯರ ಮತ್ತೊಂದು ಗುಂಪು ದುರಂತ ಸಂಭವಿಸಿದ ರಸುವಾ ಜಿಲ್ಲೆಯ ತಿಮುರೆ ಪ್ರದೇಶದಲ್ಲಿತ್ತು ಎಂದು ವರದಿಯಾಗಿದೆ.
ರಿಚಾ ಟೂರ್ಸ್ ಮೂಲಕ ಪ್ರಯಾಣಿಸಿದ್ದ ವಿವಿಧ ರಾಜ್ಯಗಳ 61 ಭಾರತೀಯ ಪ್ರಜೆಗಳು ಸಹ ಪ್ರಸ್ತುತ ಸಂಪರ್ಕಕ್ಕೆ ಸಿಕ್ಕಿಲ್ಲ. ಕೇರಳ ಮೂಲದ 33 ಜನರ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಸಂಪರ್ಕಕ್ಕೆ ಸಿಕ್ಕಿಲ್ಲ ಎಂದರೆ ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದರ್ಥವಲ್ಲ ಎಂದು ಎಂಇಎ ಸ್ಪಷ್ಟಪಡಿಸಿದೆ. ಅಧಿಕಾರಿಗಳಿಗೆ ಅವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗದ ಕಾರಣ ಈ ಪದವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದೆ.
21 ಭಾರತೀಯರ ರಕ್ಷಣೆ
ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ರಕ್ಷಿಸಲ್ಪಟ್ಟ ಗುಂಪಿನೊಂದಿಗೆ ಸಂಪರ್ಕದಲ್ಲಿದೆ. ಭಾರತದ ರಾಯಭಾರಿಗಳು ಅವರೊಂದಿಗೆ ಮಾತನಾಡಿ ಎಲ್ಲಾ ರೀತಿಯ ನೆರವಿನ ಭರವಸೆ ನೀಡಿದ್ದಾರೆ. ಈ 21 ಭಾರತೀಯರು ಕಾಠ್ಮಂಡು ತಲುಪಿದ ಬಳಿಕ ಅವರು ಭಾರತಕ್ಕೆ ವಾಪಸಾಗಲು ವ್ಯವಸ್ಥೆ ಮಾಡಲಾಗುವುದು. ರಕ್ಷಿಸಲ್ಪಟ್ಟವರ ಹೆಸರುಗಳು ಸಚಿವಾಲಯದ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಲಭ್ಯವಾಗಲಿವೆ ಎಂದು ಜೈಸ್ವಾಲ್ ತಿಳಿಸಿದರು.
ದೂರವಾಣಿಯಲ್ಲಿ ನೇಪಾಳ ಪ್ರಧಾನಿಯೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದುರಂತದ ಬಗ್ಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಭಾರತವು ಈ ಸಂಕಷ್ಟದ ಸಮಯದಲ್ಲಿ ನೇಪಾಳದ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಮತ್ತು ನೇಪಾಳಕ್ಕೆ ಸಾಧ್ಯವಿರುವ ಎಲ್ಲ ಮಾನವೀಯ ನೆರವು ನೀಡಲಿದೆ ಎಂದು ತಿಳಿಸಿದರು.
ತಮ್ಮ ಸಂಬಂಧಿಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ಕುಟುಂಬಗಳಿಗೆ ಸರಕಾರದ ಕಡೆಯಿಂದ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ರಣಧೀರ್ ಜೈಸ್ವಾಲ್ ತಿಳಿಸಿದರು.

