ನವದೆಹಲಿ/ಚಂಡೀಗಢ: ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ಡಾ.ಗುರುಪ್ರೀತ್ ಕೌರ್ ಅವರು ₹5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿನ ಮೇರೆಗೆ ಪಂಜಾಬ್ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ನೋಟಿಸ್ ಜಾರಿ ಮಾಡಿದೆ.
ಈ ಆರೋಪದ ಕುರಿತು ತನಿಖೆ ನಡೆಸಿ ಎರಡು ವಾರದೊಳಗೆ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಎನ್ಎಚ್ಆರ್ಸಿ ನಿರ್ದೇಶನ ನೀಡಿದೆ.
'ಗುರುಪ್ರೀತ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರ ಬಗ್ಗೆ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ' ಎಂದು ದೂರುದಾರರು ಕೋರ್ಟ್ ಗಮನಕ್ಕೆ ತಂದಿದ್ದು, ಇದು ಆಗಸ್ಟ್ 21ರ ನಡಾವಳಿಗಳಲ್ಲಿ ದಾಖಲಾಗಿದೆ. ಈ ಸಂಬಂಧ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
'ವ್ಯಕ್ತಿಯೊಬ್ಬರ ಹಸ್ತಕ್ಷೇಪದಿಂದ ಸಂತ್ರಸ್ತೆಯ ಗೌರವ, ಸುರಕ್ಷತೆ, ನ್ಯಾಯಸಮ್ಮತ ತನಿಖೆಗೆ ಧಕ್ಕೆಯಾಗಲಿದೆ ಎಂದು ಕಾನೂನು ಹಕ್ಕುಗಳ ಪರಿವೀಕ್ಷಣಾ ಸಂಸ್ಥೆ ಸಲ್ಲಿಸಿದ ದೂರಿನಲ್ಲಿ ಹೇಳಲಾಗಿದೆ' ಎಂದು ಎನ್ಎಚ್ಆರ್ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಪಂಜಾಬ್ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದೂರುದಾರರ ಆರೋಪವನ್ನು ಆಯೋಗವು ಪರಿಗಣನೆಗೆ ತೆಗೆದುಕೊಂಡಿದೆ ಎಂದು ಎನ್ಎಚ್ಆರ್ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರೊಬ್ಬರು ಈ ಆರೋಪ ಮಾಡಿದ್ದಾರೆ ಎಂದೂ ಅಧಿಕಾರಿ ವಿವರಿಸಿದ್ದಾರೆ.
ಎನ್ಎಚ್ಆರ್ಸಿ ನೋಟಿಸ್ ಬೆನ್ನಲ್ಲೇ, ಗುರುಪ್ರೀತ್ ವಿರುದ್ಧ ಆರೋಪ ಮಾಡಿರುವ ನಿವೃತ್ತ ನ್ಯಾಯಾಧೀಶರಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಇನ್ನೊಂದೆಡೆ, ವಿಪಕ್ಷ ನಾಯಕರು ಈ ಕುರಿತು ಭಗವಂತ್ ಮಾನ್ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ 1993ರ ಸೆಕ್ಷನ್ 12ರ ಅಡಿಯಲ್ಲಿ ಗುರುಪ್ರೀತ್ ವಿರುದ್ಧದ ಆರೋಪವು ಮೇಲ್ನೋಟಕ್ಕೆ ಸಂತ್ರಸ್ತೆಯ ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಕಂಡುಬರುತ್ತದೆ ಎಂದು ಎನ್ಎಚ್ಆರ್ಸಿ ಸದಸ್ಯ ಪ್ರಿಯಾಂಕ್ ಕಾನೂನೂಗೊ ನೇತೃತ್ವದ ಪೀಠವು ಹೇಳಿದೆ.

