ನವದೆಹಲಿ: ಬ್ಯಾಂಕ್ ನೌಕರ ದಂಪತಿ ತಮ್ಮ ಆದಾಯಕ್ಕಿಂತ 577 ಪಟ್ಟು ಹೆಚ್ಚುವರಿ ಆಸ್ತಿ ಹೊಂದಿದ್ದಾರೆ ಎಂದು ಗಮನಿಸಿದ ವಿಶೇಷ ನ್ಯಾಯಾಲಯ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿತ ಮಹಿಳೆಯ ಬಿಡುಗಡೆಗೆ ನಿರಾಕರಿಸಿದೆ ಎಂದು indianexpress.com ವರದಿ ಮಾಡಿದೆ.
ಬ್ಯಾಂಕ್ ಕ್ಲರ್ಕ್ ಆಗಿದ್ದ ಆಶಾಲತಾ ಶೆಟ್ಟಿ ಮತ್ತು PNBಯ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಗೋಕುಲನಾಥ್ ಶೆಟ್ಟಿ ವಿರುದ್ಧ ಸಿಬಿಐ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿದೆ. ಗೋಕುಲನಾಥ್ ಶೆಟ್ಟಿ ನೀರವ್ ಮೋದಿ ಮತ್ತು ಇತರರಿಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ.
ಆರೋಪಿ ಆಶಾಲತಾ ಸಾರ್ವಜನಿಕ ನೌಕರರಾಗಿದ್ದು, ತಮ್ಮ ಹೆಸರಿನಲ್ಲಿ ಫ್ಲ್ಯಾಟ್ ಬುಕ್ ಮಾಡಿರುವುದು ಹಾಗೂ ಕೋಟ್ಯಂತರ ರೂಪಾಯಿ ಪಾವತಿಸಿರುವ ಬಗ್ಗೆ ಬ್ಯಾಂಕ್ ಮತ್ತು ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ. ಅವರ ಆಸ್ತಿ ಮೊತ್ತವು ಅವರ ಆದಾಯದ ಮೂಲಕ್ಕಿಂತ ಹೆಚ್ಚಾಗಿದೆ. ಪ್ರಾಥಮಿಕ ತನಿಖೆಯಿಂದ ಇಬ್ಬರೂ ಆರೋಪಿಗಳು ಕೋಟ್ಯಂತರ ರೂ.ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ತಿಳಿದುಬಂದಿದೆ ಎಂದು ವಿಶೇಷ ನ್ಯಾಯಾಧೀಶ ಎಸ್ ಕೆ ಕರ್ಹಲೆ ಹೇಳಿದರು.
ನ್ಯಾಯಾಲಯದ ಪ್ರಕಾರ, ದಂಪತಿ ವಿರುದ್ಧ ಸಿಬಿಐ ಸಲ್ಲಿಸಿರುವ ಚಾರ್ಜ್ಶೀಟ್ ಮತ್ತು ಹೆಚ್ಚುವರಿ ಚಾರ್ಜ್ಶೀಟ್ನಲ್ಲಿ ಅವರು ಒಟ್ಟು 4.28 ಕೋಟಿ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಇದು ಅವರ ಆದಾಯಕ್ಕೆ ಹೋಲಿಸಿದರೆ 577.17%ರಷ್ಟು ಅಸಮ ಪ್ರಮಾಣದಲ್ಲಿವೆ ಎಂದು ಉಲ್ಲೇಖಿಸಲಾಗಿದೆ.
ಸಿಬಿಐ ತನಿಖೆಯಲ್ಲಿ ಕರ್ನಾಟಕದಲ್ಲಿ ದಂಪತಿ 4.28 ಕೋಟಿ ಮೌಲ್ಯದ ಆಸ್ತಿಗಳನ್ನು ಹೊಂದಿದ್ದು, ಅವರ ಆದಾಯದ ಮೂಲಗಳು ಕೇವಲ 74 ಲಕ್ಷ ಎಂದು ತಿಳಿದುಬಂದಿದೆ. ಅಲ್ಲದೆ, ಅವರು ಥಾಣೆ, ಪನ್ವೇಲ್ ಮತ್ತು ಮಲಾಡ್ನಲ್ಲಿ ಫ್ಲ್ಯಾಟ್ಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಆದರೆ, ಈ 3 ಫ್ಲ್ಯಾಟ್ಗಳಿಗೆ ಪೂರ್ಣ ಮೊತ್ತವನ್ನು ಪಾವತಿಸಿರಲಿಲ್ಲ ಮತ್ತು ವ್ಯವಹಾರ ರದ್ದುಗೊಳಿಸಿರುವುದರಿಂದ ಅವುಗಳನ್ನು ತಮ್ಮ ಆಸ್ತಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದಂಪತಿ ವಾದಿಸಿದ್ದರು.
ದಂಪತಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 2018ರಲ್ಲಿ PNBಯ ಮುಖ್ಯ ವಂಚನೆ ಪ್ರಕರಣದಲ್ಲಿ ಬಂಧಿತನಾಗಿದ್ದ ಗೋಕುಲನಾಥ್ ಶೆಟ್ಟಿಯನ್ನು ದೀರ್ಘಕಾಲ ಜೈಲುವಾಸ ಅನುಭವಿಸಿರುವ ಕಾರಣ 2024ರಲ್ಲಿ ಬಾಂಬೆ ಹೈಕೋರ್ಟ್ ಜಾಮೀನಿನಲ್ಲಿ ಬಿಡುಗಡೆ ಮಾಡಿತ್ತು.

