ನವದೆಹಲಿ: ಜೆನ್ ಝೀಗಳ ಜೊತೆ ಸಂಪರ್ಕ ಸಾಧಿಸುವ ತನ್ನ ಯೋಜನೆಯ ಭಾಗವಾಗಿ, ಅದಕ್ಕೆಂದೇ ಪ್ರತ್ಯೇಕ ತಂಡವನ್ನು ಬಿಜೆಪಿ ರಚಿಸಿದೆ. ಯುವಜನರೊಂದಿಗೆ ಸಂವಹನಕ್ಕಾಗಿ ಈ ತಂಡವು ವಿವಿಧ ಯೋಜನೆಗಳನ್ನು ರೂಪಿಸಲಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಪ್ರಧಾನ ಕಾರ್ಯದರ್ಶಿಗಳಾದ ಸ್ಮೃತಿ ಇರಾನಿ, ವಿನೋದ್ ತಾವ್ಡೆ, ಗುಜರಾತ್ ಸಚಿವ ಹರ್ಷ ಸಂಘವಿ, ಛತ್ತೀಸಗಢ ಸಚಿವ ಒ.ಪಿ.ಚೌಧರಿ ಮತ್ತಿತರರು ಈ ತಂಡದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆನ್ ಝೀಗಳ ನಿರೀಕ್ಷೆಗಳು, ಆತಂಕ ಮತ್ತು ಆಕಾಂಕ್ಷೆಗಳನ್ನು ಕೇಂದ್ರೀಕರಿಸಿ ಪಕ್ಷವು ಶೀಘ್ರವೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮತ್ತು ಪಕ್ಷದ ಪ್ರಮುಖರ ಜೊತೆ ಸಂವಾದಕ್ಕೆ ಯುವಜನರಿಗೆ ಅವಕಾಶ ನೀಡುವ ನಿರೀಕ್ಷೆ ಇದೆ.
ವಿರೋಧ ಪಕ್ಷಗಳು ಯುವಜನರೊಂದಿಗೆ ಸಂವಹನ ಸಾಧಿಸಲು ಕಾರ್ಯೋನ್ಮುಖವಾಗುತ್ತಿದ್ದಂತೆಯೇ ಬಿಜೆಪಿ ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಯುವಜನರೊಂದಿಗೆ ಆಳವಾದ ಬಾಂಧವ್ಯ ಬೆಳೆಸಿಕೊಳ್ಳುವಂತೆ ಸಚಿವರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಈಚೆಗೆ ಕರೆ ನೀಡಿದ್ದರು.
ವಂದೇ ಮಾತರಂ: ಕಾಂಗ್ರೆಸ್ ನಿಲುವು ಖಂಡಿಸಿ ನಿರ್ಣಯ
ನವದೆಹಲಿ: ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡುವ ಕಾಂಗ್ರೆಸ್ ನಿರ್ಧಾರವನ್ನು ಖಂಡಿಸುವ ನಿರ್ಣಯವನ್ನು ಶನಿವಾರ ನಡೆದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ಅಂಗೀಕರಿಸಿದೆ.
'ರಾಜಕೀಯ ಅನುಕೂಲ ಮತ್ತು ತುಷ್ಟೀಕರಣಕ್ಕಾಗಿ ರಾಷ್ಟ್ರೀಯ ಗೀತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದನ್ನು ಒಪ್ಪಲಾಗದು. ಸಾಂವಿಧಾನಿಕ ಸಂಸ್ಥೆಗಳು ಅಥವಾ ದೇಶದ ಕಾನೂನನ್ನು ಕಾಂಗ್ರೆಸ್ ಮೀರುವುದು ಸಾಧ್ಯವಿಲ್ಲ' ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ನಿತಿನ್ ನವೀನ್ ಹೇಳಿದ್ದಾರೆ.
'ಗೀತೆಯ ಮಹತ್ವವನ್ನು ದೇಶದ ಮೂಲೆ ಮೂಲೆಗೂ ಸಾರಲು ಅಭಿಯಾನವನ್ನು ಆರಂಭಿಸಲಾಗುವುದು. ಅತ್ಯಂತ ಪರಿಶುದ್ಧವಾದ ರಾಷ್ಟ್ರೀಯ ಭಾವನೆ ಹೊಂದಿರುವ ಸಾಮ್ರಾಜ್ಯಶಾಹಿ ವಿರೋಧಿ ಘೋಷಣೆ ಎಂದು ವಂದೇ ಮಾತರಂ ಗೀತೆಯ ಕುರಿತು ಮಹಾತ್ಮ ಗಾಂಧಿ ಬಣ್ಣಿಸಿರುವುದನ್ನೂ ವ್ಯಾಪಕವಾಗಿ ಪ್ರಚಾರ ಮಾಡುತ್ತೇವೆ' ಎಂದು ಅವರು 'ಎಕ್ಸ್' ಖಾತೆಯಲ್ಲಿ ತಿಳಿಸಿದ್ದಾರೆ. 1937ರಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಅನುಗುಣವಾಗಿ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಎರಡೇ ಚರಣಗಳನ್ನು ಹಾಡಲಾಗುವುದು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಇದೇ 19ರಂದು ಪುನರುಚ್ಚರಿಸಿತ್ತು.

