ಕೋಲ್ಕತಾ: ಟಿಬೆಟ್ ಗಡಿಗೆ ಸಮೀಪದ ನೇಪಾಳದ ಕೆಲವು ಭಾಗಗಳಲ್ಲಿ ಧಿಡೀರ್ ಪ್ರವಾಹ ಸಂಭವಿಸಿದ ಬಳಿಕ ನಾಪತ್ತೆಯಾಗಿರುವ ನೂರಾರು ಜನರಲ್ಲಿ ಟಿಎಂಸಿಯ ಮಾಜಿ ಶಾಸಕ ಸುಭ್ರಾಂಶು ರಾಯ್ ಅವರ ಪತ್ನಿ ಶರ್ಮಿಷ್ಠಾ ಭೌಮಿಕ್ ರಾಯ್ ಕೂಡ ಸೇರಿದ್ದಾರೆ.
ಉತ್ತರ 24 ಪರಗಣಗಳ ಜಿಲ್ಲೆಯ ನಿವಾಸಿಯಾಗಿರುವ ಶರ್ಮಿಷ್ಠಾ ಆಗಸ್ಟ್ 25ರ ರಾತ್ರಿಯಿಂದ ತಮ್ಮ ಪತಿಯನ್ನು ಸಂಪರ್ಕಿಸಿಲ್ಲ.
ಸುಭ್ರಾಂಶು ರಾಯ್ ಬಿಜ್ಪುರದ ಮಾಜಿ ಟಿಎಂಸಿ ಶಾಸಕರಾಗಿದ್ದು,ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಅವರ ಪುತ್ರರಾಗಿದ್ದಾರೆ. ಅವರ ಪತ್ನಿ ಟ್ರಾವೆಲ್ ಏಜೆನ್ಸಿ ಮೂಲಕ ವ್ಯವಸ್ಥೆ ಮಾಡಲಾದ ಪ್ರವಾಸದಡಿ ಆ.21ರಂದು ನೇಪಾಳಕ್ಕೆ ತೆರಳಿದ್ದರು ಮತ್ತು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರು.
ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ಪ್ರಯಾಣಿಸುತ್ತಿದ್ದ ಕೋಲ್ಕತಾದ 32 ಸದಸ್ಯರ ಗುಂಪು ಕೂಡ ಕಾಣೆಯಾಗಿರುವವರಲ್ಲಿ ಸೇರಿದೆ.
ಈ ಗುಂಪಿನಲ್ಲಿ 30 ಪ್ರವಾಸಿಗರು ಮತ್ತು ಇಬ್ಬರು ಪ್ರವಾಸ ನಿರ್ವಾಹಕರಿದ್ದು, ಅದು ಆ.21ರಂದು ಕೋಲ್ಕತಾದಿಂದ ಹೊರಟು ಮರುದಿನ ನೇಪಾಳ ತಲುಪಿತ್ತು. ಬುಧವಾರ ಬೆಳಿಗ್ಗೆ ಈ ಗುಂಪು ನೇಪಾಳ-ಟಿಬೆಟ್ ಗಡಿಯ ಸಮೀಪವಿರುವ ರಸುವಾಗಢಿಯನ್ನು ತಲುಪಿದ್ದು,ಅಲ್ಲಿ ಅದರ ಸದಸ್ಯರು ಬೆಳಿಗ್ಗೆ 8:30ರ ಸುಮಾರಿಗೆ ವಲಸೆ ಕಚೇರಿಯಲ್ಲಿದ್ದರು.
ಪ್ರವಾಹವು ಮಧ್ಯ ನೇಪಾಳದಲ್ಲಿ ಜನವಸತಿ ಪ್ರದೇಶಗಳನ್ನು ನಾಶಪಡಿಸಿದೆ, ಸೇತುವೆಗಳನ್ನು ಧ್ವಂಸಗೊಳಿಸಿದೆ ಮತ್ತು ಜಲವಿದ್ಯುತ್ ಸೌಲಭ್ಯಗಳು ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯನ್ನುಂಟು ಮಾಡಿದೆ.
ಬುಧವಾರ ಬೆಳಿಗ್ಗೆ 8:37ಕ್ಕೆ ಟಿಬೆಟ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು ಮತ್ತು ಅದರ ಮೂರು ನಿಮಿಷಗಳ ಬಳಿಕ ದಿಢೀರ್ ಪ್ರವಾಹದ ವರದಿಗಳು ಬಂದಿದ್ದವು ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಹೇಳಿದ್ದಾರೆ.
ಭೂಕಂಪದಿಂದ ಉಂಟಾದ ಕಂಪನಗಳು ಹಿಮನದಿಯ ಸ್ಫೋಟಕ್ಕೆ ಕಾರಣವಾಗಿರಬಹುದು ಮತ್ತು ಇದು ದಿಢೀರ್ ಪ್ರವಾಹವನ್ನುಂಟು ಮಾಡಿತ್ತು ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.

