ಮುಂಬೈ: 'ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಮಾತುಕತೆಯ ನ್ಯಾಯಸಮ್ಮತವಾದ ವಿಧಾನ. ಜೆನ್-ಝೀಗಳ ಅಸಮಾಧಾನವು ನೈಜವಾಗಿತ್ತು, ನಾನು ಅವರ ಪ್ರಾಮಾಣಿಕತೆಯನ್ನು ನಂಬುತ್ತೇನೆ' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
2000ಕ್ಕೂ ಹೆಚ್ಚು ಜೆನ್-ಝೀಗಳು (ಯುವ ಸಮುದಾಯ) ಮತ್ತು ಜೆನ್ ಅಲ್ಫಾ ಸದಸ್ಯರ ಜೊತೆ ಭಾಗವತ್ ಅವರು ಗುರುವಾರ ಸಂವಾದ ನಡೆಸಿದರು.
ಐಐಎಂಯುಎನ್ (ರಾಷ್ಟ್ರಗಳನ್ನು ಒಂದುಗೂಡಿಸಲು ಭಾರತದ ಅಂತರರಾಷ್ಟ್ರೀಯ ಚಳವಳಿ) ಸಂಘಟನೆಯ 15ನೇ ವಾರ್ಷಿಕೋತ್ಸವ ಅಂಗವಾಗಿ ಸಂವಾದ ಏರ್ಪಡಿಸಲಾಗಿತ್ತು.
ಅವರ ಸಂವಾದವು, ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆ ನಂತರ ಜೆನ್-ಝೀಗಳನ್ನು ಮುಟ್ಟುವ ಆರ್ಎಸ್ಎಸ್ನ ಪ್ರಯತ್ನದಂತೆ ಕಂಡುಬಂತು.
ಇತ್ತೀಚೆಗೆ ನಡೆದ ಜೆನ್-ಝೀ ಹೋರಾಟವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, 'ಮಾತುಕತೆಗೆ ಪ್ರತಿಭಟನೆಯೂ ಒಂದು ಮಾರ್ಗ. ಭಿನ್ನ ಅಭಿಪ್ರಾಯಗಳು ಒಗ್ಗೂಡಿ, ಚರ್ಚೆ ನಡೆಸಿದಾಗಲೇ ಒಟ್ಟಾಭಿಪ್ರಾಯ ರೂಪಿಸಲು ಸಾಧ್ಯವಾಗಲಿದೆ' ಎಂದರು.
'ಪ್ರತಿಭಟನೆಯು ಏಕತೆಯನ್ನು ಮೂಡಿಸಬೇಕೆ ಹೊರತು ವಿಭಜನೆಯನ್ನಲ್ಲ. ಹಲವು ಕಾರಣಗಳಿಂದಾಗಿ ಮಾತುಕತೆ ಮೂಲಕ ಸಮಸ್ಯೆಗಳು ಈಡೇರದಿದ್ದಾಗ ಜನರು ಪ್ರತಿಭಟನೆಗೆ ಇಳಿಯುತ್ತಾರೆ' ಎಂದು ಹೇಳಿದರು.
'ಭಾರತದ ಶಿಕ್ಷಣ ವ್ಯವಸ್ಥೆ ಕುರಿತು ಜೆನ್-ಝೀ ಆತಂಕಗಳು ನ್ಯಾಯಸಮ್ಮತವಾಗಿದ್ದವು. ಮಾತುಕತೆ ಮೊದಲ ಮಾರ್ಗ. ಅದು ಫಲಿಸದಿದ್ದಾಗ ಮುಂದಿನ ಹಾದಿ ಹಿಡಿಯಲೇಬೇಕಲ್ಲವೇ?' ಎಂದರು.
'ಹಿಂದಿನ ಪೀಳಿಗೆಯು ದೊಡ್ಡವರು ಹೇಳಿದ್ದನ್ನು ಪ್ರಶ್ನಿಸದೇ ಒಪ್ಪಿಕೊಳ್ಳುತ್ತಿತ್ತು. ಆದರೆ, ಈಗ ಜೆನ್-ಝೀಗಳು ಸ್ನೇಹಪಪೂರ್ವಕ ಮತ್ತು ಗೌರವಯುತವಾಗಿ ತಾರ್ಕಿಕ ಉತ್ತರ ಬಯಸಿದ್ದರು ಅಷ್ಟೆ' ಎಂದರು.
'ಜಿಡಿಪಿಯ ಶೇ 6ರಷ್ಟನ್ನು ಶೀಕ್ಷಣಕ್ಕೆ ವೆಚ್ಚ ಮಾಡಬೇಕು ಎನ್ನುವ ಬೇಡಿಕೆಗೆ ನನ್ನ ಸಮ್ಮತಿ ಇದೆ. ಶಿಕ್ಷಣ ಲಾಭ ಮಾಡಿಕೊಳ್ಳುವ ವ್ಯವಹಾರವಲ್ಲ. ಎಲ್ಲರಿಗೂ ಕೈಗೆಟಕುವಂತಿರಬೇಕು' ಎಂದು ಅವರು ಹೇಳಿದರು.
'ಜಾಲತಾಣ ನಿಷೇಧ ಪರಿಹಾರವಲ್ಲ'
ಮಕ್ಕಳು ಬಳಸುವ ಜಾಲತಾಣಗಳ ನಿಷೇಧಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಚಿಂತನೆ ಕುರಿತೂ ಮೋಹನ್ ಭಾಗವತ್ ಅವರು ಮಾತನಾಡಿದರು. 'ಸಾಮಾಜಿಕ ಮಾಧ್ಯಮಗಳಿಂದ ಆಗುವ ದುಷ್ಪರಿಣಾಮಗಳನ್ನು ತಡೆಯಲು ನಿಷೇಧವೊಂದೇ ಪರಿಹಾರ ಆಗಲಾರದು. ಕಳ್ಳ ಮಾರ್ಗದಲ್ಲೂ ಅವು ಕಾರ್ಯನಿರ್ವಹಿಸಬಹುದು' ಎಂದರು. 'ಸಮಾಜವು ಸ್ವಯಂ ಶಿಸ್ತು ಬೆಳೆಸಿಕೊಳ್ಳಬೇಕು. ಆನ್ಲೈನ್ನಲ್ಲಿ ಬರುವ ಎಲ್ಲದನ್ನೂ ನಂಬುವ ಮುನ್ನ ಮಾಹಿತಿಯು ಅಧಿಕೃತ ಮೂಲದಿಂದ ಬಂದಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು' ಎಂದರು. 'ಮನುಷ್ಯನ ವರ್ತನೆ ಬದಲಾಗದೇ ಕಾನೂನು ಮತ್ತು ನಿರ್ಬಂಧಗಳು ಮಾತ್ರ ಕೆಲಸ ಮಾಡಲಾರವು. ಮನುಷ್ಯ ತನ್ನ ಮನಸ್ಥಿತಿ ಬದಲಿಸಿಕೊಳ್ಳದಿದ್ದರೆ ಎಷ್ಟೇ ಕಾನೂನು ತಂದರೂ ಏನು ಪ್ರಯೋಜನ' ಎಂದು ಪ್ರಶ್ನಿಸಿದರು. 'ಸಾಮಾಜಿಕ ಮಾಧ್ಯಮ ಬಳಸುವ ಯುವ ಸಮುದಾಯ ಸ್ವಯಂ ಶಿಸ್ತು ರೂಢಿಸಿಕೊಳ್ಳಬೇಕು. ಹಳೆಯ ಪೀಳಿಗೆ ಇದನ್ನು ಅರ್ಥಮಾಡಿಸುವ ಕೆಲಸ ಮಾಡಬೇಕು' ಎಂದು ಸಲಹೆ ನೀಡಿದರು.

