ನವದೆಹಲಿ: 'ಯಾವ ಸಚಿವರು ಸದನಕ್ಕೆ ಬರಬೇಕು ಮತ್ತು ಉತ್ತರಿಸಬೇಕು ಎಂಬುದನ್ನು ವಿರೋಧ ಪಕ್ಷಗಳು ನಿರ್ಧರಿಸಲು ಸಾಧ್ಯವಿಲ್ಲ' ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶುಕ್ರವಾರ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದರು.
ಜಂತರ್ ಮಂತರ್ನಲ್ಲಿ ಪ್ರತಿಭಟನೆನಿರತ ವಿದ್ಯಾರ್ಥಿಗಳ ಮೇಲೆ ಈಚೆಗೆ ನಡೆದ ಪೊಲೀಸ್ ಬಲಪ್ರಯೋಗದ ಕುರಿತಾದ ಪ್ರಶ್ನೆಗಳಿಗೆ ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕೆಂದು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವ ನಡುವೆಯೇ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಶುಕ್ರವಾರವೂ ಸದನದ ಕಲಾಪಗಳಿಗೆ ಅಡಚಣೆ ಉಂಟಾದಾಗ ಮಾತನಾಡಿದ ರಿಜಿಜು, 'ಅಮಿತ್ ಶಾ ಅವರು ಪ್ರತಿದಿನ ಸಂಸತ್ತಿಗೆ ಬರುತ್ತಾರೆ ಮತ್ತು ತಡರಾತ್ರಿಯವರೆಗೂ ಇಲ್ಲೇ ಇರುತ್ತಾರೆ' ಎಂದು ಹೇಳಿದರು.
'ಶಾ ಅವರ ಹೆಸರನ್ನು ಕೇಳುವಾಗಲೇ ಭಯೋತ್ಪಾದಕರಲ್ಲಿ ನಡುಕ ಹುಟ್ಟುತ್ತದೆ. ಲೋಕಸಭೆಯಲ್ಲಿ ಚರ್ಚೆ ಆರಂಭವಾಗಿ ಶಾ ಅವರು ಉತ್ತರಿಸತೊಡಗಿದಾಗ ಅದನ್ನು ಅರಗಿಸಿಕೊಳ್ಳುವ ಶಕ್ತಿ ನಿಮಗಿರುವುದಿಲ್ಲ' ಎಂದು ಪ್ರತಿಭಟಿಸುತ್ತಿದ್ದ ವಿಪಕ್ಷ ಸದಸ್ಯರನ್ನು ಉದ್ದೇಶಿಸಿ ರಿಜಿಜು ಹೇಳಿದರು.
'ದಿನದ ಕಲಾಪದ ಸಂದರ್ಭದಲ್ಲಿ ನಿಗದಿತ ಕಾರ್ಯಸೂಚಿಯನ್ನು ಹೊಂದಿರುವ ಸಚಿವರೇ ಸದನಕ್ಕೆ ಬರಬೇಕಾಗುತ್ತದೆ. ಸದನಕ್ಕೆ ಯಾವ ಸಚಿವರು ಬರುತ್ತಾರೆ ಮತ್ತು ಉತ್ತರಿಸುತ್ತಾರೆ ಎಂಬುದನ್ನು ಸರ್ಕಾರ ಮತ್ತು ಪೀಠ (ಸ್ಪೀಕರ್) ನಿರ್ಧರಿಸುತ್ತದೆ' ಎಂದರು.
ಪ್ರತಿಭಟನೆನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಬಲಪ್ರಯೋಗದ ಕುರಿತು ಶಾ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಲೇ ಬಂದಿವೆ. ಇದರಿಂದ ಮುಂಗಾರು ಅಧಿವೇಶನದ ಕಲಾಪಗಳಿಗೆ ಪದೇ ಪದೇ ಅಡ್ಡಿ ಉಂಟಾಗಿದೆ. ಶುಕ್ರವಾರವೂ ಗದ್ದಲ ನಡೆದು, ಲೋಕಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಮಸೂದೆ ಅಂಗೀಕಾರ: ಸುಮಾರು 16 ನಿಮಿಷ ನಡೆದ ಶೂನ್ಯವೇಳೆಯಲ್ಲಿ, ಲೋಕಸಭೆಯು 'ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ಮಸೂದೆ-2026'ನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿತು. ವಿವಿಧ ಸಂಸದೀಯ ಸಮಿತಿಗಳ ವರದಿಗಳನ್ನು ಸದನದ ಮುಂದೆ ಮಂಡಿಸಲಾಯಿತು.

