ನವದೆಹಲಿ: ವೈದ್ಯಕೀಯ ವಿದ್ಯಾರ್ಥಿಗಳ ಕಡ್ಡಾಯ ಗ್ರಾಮೀಣ ಸೇವೆ ಕುರಿತು ಏಕರೂಪದ ರಾಷ್ಟ್ರೀಯ ನೀತಿ ರೂಪಿಸುವ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಒಲವು ತೋರಿದೆ. ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪಡೆದು ಸಲ್ಲಿಸುವುದಾಗಿ ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ.
ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ಶಾಶ್ವತ ನೋಂದಣಿಗಾಗಿ ಒಂದು ವರ್ಷದ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸುವ ಕರ್ನಾಟಕ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಈ ಬಗ್ಗೆ ಒಲವು ತೋರಿತು.
ಈ ನೀತಿಯು ಅತ್ಯಂತ ಮುಖ್ಯ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಹೊಂದಿದ್ದಾರೆ ಎಂದು ನ್ಯಾಯಮೂರ್ತಿ ನರಸಿಂಹ ಪ್ರತಿಪಾದಿಸಿದರು.
2024ರ ಮೇ ತಿಂಗಳಲ್ಲಿ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ನರಸಿಂಹ, 'ಗ್ರಾಮೀಣ ಸೇವೆ ಸಲ್ಲಿಸುವುದರಿಂದ ಖಾಸಗಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಏಕೆ ವಿನಾಯಿತಿ ನೀಡಬೇಕು' ಎಂದು ಪ್ರಶ್ನಿಸಿದ್ದರು. ಶುಕ್ರವಾರದ ವಿಚಾರಣೆ ವೇಳೆ ಈ ಮಾತನ್ನು ಪುನರುಚ್ಚರಿಸಿದರು.
'ಇದು ಬಹಳ ಮುಖ್ಯವಾದ ನೀತಿ. ಯಾಕೆಂದರೆ, ರಾಜ್ಯಗಳ ಸಬ್ಸಿಡಿ ಇಲ್ಲದೆ ಯಾವುದೇ ವೈದ್ಯಕೀಯ ಶಿಕ್ಷಣ ಪೂರ್ಣಗೊಳ್ಳುವುದಿಲ್ಲ. ನಾವು ರಾಜ್ಯಗಳ ಸಬ್ಸಿಡಿಗಳ ಬಗ್ಗೆ ಯೋಚಿಸದಿದ್ದರೂ, ವೈದ್ಯಕೀಯ ತಂತ್ರಜ್ಞಾನ ಅಥವಾ ವೈದ್ಯಕೀಯ ವಿಜ್ಞಾನವು ಒಂದು ಸಂಪನ್ಮೂಲವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಆಸ್ತಿಯಾಗಿದ್ದು, ರಾಜ್ಯದ ಹಿತಕ್ಕಾಗಿ ಅವರನ್ನು ಬಳಸಿಕೊಳ್ಳಬಹುದು' ಎಂದು ಪೀಠ ಅಭಿಪ್ರಾಯಪಟ್ಟಿತು. ಬಳಿಕ, ಪೀಠವು ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.
ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಕಾಯ್ದೆಯನ್ನು 2012ರಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿತ್ತು. ಕಾಯ್ದೆಯ ನಿಯಮಗಳಂತೆ ಸರ್ಕಾರಿ ವೈದ್ಯಕೀಯ ಕೋಟಾದಲ್ಲಿ ಸೀಟು ಪಡೆದು ವೈದ್ಯಕೀಯ ಪದವಿ (ಎಂಬಿಬಿಎಸ್) ಮುಗಿಸಿದವರು ಕನಿಷ್ಠ ಒಂದು ವರ್ಷ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಬೇಕು. ಆ ನಂತರವೇ ಅಂತಹ ವಿದ್ಯಾರ್ಥಿಗಳು ಕರ್ನಾಟಕ ವೈದ್ಯಕೀಯ ಪರಿಷತ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಖಾಸಗಿ ಕೋಟಾದ ವಿದ್ಯಾರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂದು ಸರ್ಕಾರವು 2023ರ ಜುಲೈ 28ರಂದು ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಶೀಶ್ ರೆಡು ಎಂಬವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

