ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಭಾರಿ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳು ಸೇರಿದಂತೆ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದಾಗಿ ಹಲವೆಡೆ ಸಂಚಾರ ದಟ್ಟನೆ ಉಂಟಾಗಿದ್ದು, ವಾಹನ ಸವಾರರು ಕಿರಿಕಿರಿ ಅನುಭವಿಸಿದ್ದಾರೆ.
ದಕ್ಷಿಣ ದೆಹಲಿಯ ಫತೇಪುರ್ ಬೇರಿ, ವಾಲ್ಮೀಕಿ ಬಸ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ನಿರಂತರ ಮಳೆಯಿಂದಾಗಿ ನಗರದಾದ್ಯಂತ ಮರಗಳು ಧರೆಗುರುಳಿದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ಕುರಿತು ದೂರುಗಳು ಬಂದಿವೆ ಎಂದು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ತಿಳಿಸಿದೆ.
ಮೆಹ್ರೌಲಿ-ಬಾದರ್ಪುರ ರಸ್ತೆ, ಐಟಿಒ, ವಜೀರಾಬಾದ್ ರಸ್ತೆ, ಪಟೇಲ್ ರಸ್ತೆ, ರೋಹ್ಟಕ್ ರಸ್ತೆ, ಶಂಕರ್ ರಸ್ತೆ, ಕೀರ್ತಿ ನಗರ ರಸ್ತೆ, ದೆಹಲಿ-ಜೈಪುರ ಹೆದ್ದಾರಿ, ಪೀರಾ ಗಡಿ ಮತ್ತು ಶಹೀನ್ ಬಾಗ್ನಲ್ಲಿ ಭಾರಿ ಸಂಚಾರ ದಟ್ಟಣೆ ವರದಿಯಾಗಿದೆ. ಪೂರ್ವ ದೆಹಲಿಯ ಜಿಟಿ ರಸ್ತೆ, ಜಿಟಿಬಿ ಎನ್ಕ್ಲೇವ್ ಮತ್ತು ದಿಲ್ಶಾದ್ ಗಾರ್ಡನ್ನಲ್ಲೂ ವಾಹನ ಸಂಚಾರ ಮಂದಗತಿಯಲ್ಲಿತ್ತು.
ಮಹಿಪಾಲ್ಪುರ ಟಿ-ಪಾಯಿಂಟ್, ಮೆಹ್ರೌಲಿ-ಬಾದರ್ಪುರ ರಸ್ತೆ, ಛತ್ತರ್ಪುರ, ಶಕರ್ಪುರ, ದಕ್ಷಿಣ್ಪುರಿ, ಓಖ್ಲಾ, ಸಂಗಮ್ ವಿಹಾರ್, ಸೈನಿಕ ಫಾರ್ಮ್ಸ್ ಮತ್ತು ಕೆಂಪು ಕೋಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಂತಿರುವ ಬಗ್ಗೆ ವರದಿಯಾಗಿದೆ.
'ರೆಡ್ ಅಲರ್ಟ್' ಘೋಷಣೆ
ಮುಂದಿನ ಕೆಲವು ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) 'ರೆಡ್ ಅಲರ್ಟ್' ಘೋಷಿಸಿದೆ.
ಆಗಸ್ಟ್ 10ರವರೆಗೆ ದೆಹಲಿಯಾದ್ಯಂತ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

