ನವದೆಹಲಿ: ಬೊಫೋರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುಜಾ ಬ್ರದರ್ಸ್ ಮತ್ತು ಸ್ವೀಡನ್ ಮೂಲದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಎಬಿ ಬೊಫೋರ್ಸ್ ವಿರುದ್ಧದ ಎಲ್ಲ ಕ್ರಿಮಿನಲ್ ತನಿಖೆ ರದ್ದು ಮಾಡಿ 2005ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ದಶಕಗಳ ಹಿಂದಿನ ಪ್ರಕರಣದ ತನಿಖೆಗೆ ಮರುಜೀವ ಕೊಡುವ ಉದ್ದೇಶದಿಂದ ಅಡ್ವೊಕೇಟ್ ಅಜಯ್ ಕೆ ಅಗರ್ವಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಸ್ಟೀಸ್ ಜೆ.ಬಿ. ಪರದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ವಜಾ ಮಾಡಿದೆ.
ಮೃತಪಟ್ಟಿರುವ ಶ್ರೀಚಂದ್ ಪಿ ಹಿಂದುಜಾ ಮತ್ತು ಗೋಪಿಚಂದ್ ಪಿ ಹಿಂದುಜಾ ಅವರ ಹೆಸರುಗಳನ್ನು ಅರ್ಜಿಯಿಂದ ತೆಗೆದುಹಾಕಲು 4 ವಾರಗಳ ಸಮಯಾವಕಾಶ ನೀಡುವಂತೆ ಅಗರ್ವಾಲ್ ಕೋರಿದ್ದರು. ಸಮಯ ನೀಡಲು ನಿರಾಕರಿಸಿದ ಪೀಠ, ಈ ವಿಷಯಕ್ಕೆ ಸಂಬಂಧಿಸಿದಂತೆ ಸುದೀರ್ಘ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಪ್ರಕರಣದಲ್ಲಿ ಆಕ್ಷೇಪಣೆ ಮುಂದುವರಿಸಿರುವುದರ ಹಿಂದಿನ ಉದ್ದೇಶದ ಬಗ್ಗೆ ಪ್ರಶ್ನಿಸಿದ ನ್ಯಾಯಮೂರ್ತಿ ಪರದಿವಾಲಾ, 2005ರಲ್ಲೇ ದೆಹಲಿ ಹೈಕೋರ್ಟ್ ಎಲ್ಲ ಕ್ರಿಮಿನಲ್ ತನಿಖೆಯನ್ನು ರದ್ದು ಮಾಡಿರುವಾಗ ಇದರಲ್ಲಿ ತೀರ್ಮಾನಿಸಲು ಮತ್ತೇನಿದೆ? ಎಂದು ಕೇಳಿದ್ದಾರೆ.
ಬೊಫೋರ್ಸ್ ಪ್ರಕರಣ ಕುರಿತಂತೆ 2005ರ ಮೇ 31ರಂದು ಐತಿಹಾಸಿಕ ತೀರ್ಪು ಪ್ರಕಟಿಸಿದ್ದ ದೆಹಲಿ ಹೈಕೋರ್ಟ್, ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಚಂದ್ ಹಿಂದುಜಾ ಜೊತೆಗೆ ಎಬಿ ಬೊಫೋರ್ಸ್ ಮೇಲಿನ ಎಲ್ಲ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸಿತ್ತು. ಪ್ರಾಸಿಕ್ಯೂಶನ್ ಕಡೆಯಿಂದ ಗಂಭೀರ ಸಾಕ್ಷ್ಯಾಧಾರಗಳ ಕೊರತೆಯನ್ನು ಕೋರ್ಟ್ ಎತ್ತಿಹಿಡಿದಿತ್ತು. 1986ರ ಡೀಲ್ ಪಡೆಯುವಲ್ಲಿ ಹಿಂದುಜಾ ಸಹೋದರರ ನೇರ ಪಾತ್ರವನ್ನು ಸಾಬೀತುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಹೇಳಿತ್ತು.
ಸ್ವೀಡನ್ ಅಧಿಕಾರಿಗಳಿಂದ ಸಿಬಿಐ ಪಡೆದಿದೆ ಎಂದು ಹೇಳಿರುವ ದಾಖಲೆ ಪತ್ರಗಳು ಮೂಲ ದಾಖಲೆಗಳೂ ಅಲ್ಲ, ದೃಢೀಕೃತ ಪ್ರತಿಗಳೂ ಅಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.
1986ರ ಮಾರ್ಚ್ 24 ರಂದು ಭಾರತ ಸರ್ಕಾರ ಮತ್ತು ಸ್ವೀಡನ್ನ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಎಬಿ ಬೊಫೋರ್ಸ್ ನಡುವೆ 155 ಎಂ.ಎಂ. ಫೀಲ್ಡ್ ಹೌವಿಟ್ಜರ್ ಫಿರಂಗಿ ಖರೀದಿಗೆ ₹1,437 ಕೋಟಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

