ಬದಿಯಡ್ಕ: ಕೊಡುಗೈ ದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ಟರ ದಾರಿಯಲ್ಲೇ ಸಾಗಿರುವ ಅವರ ಪುತ್ರ ಸಾಯಿರಾಂ ಕೃಷ್ಣ ಭಟ್ಟರು, ಬಡಜನತೆಯ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಮತ್ತೊಮ್ಮೆ ತಮ್ಮ ಉದಾರತೆಯನ್ನು ಮೆರೆದಿದ್ದಾರೆ. ಬುಧವಾರ ಕಿಳಿಂಗಾರು ಮನೆಯಲ್ಲಿ ಸಹಾಯಧನ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅವರು, ಸಾಯಿರಾಂ ಕೃಷ್ಣ ಭಟ್ಟರ ಸಮಾಜಮುಖಿ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕಿಳಿಂಗಾರು ಕುಟುಂಬವು ದಾನ-ಧರ್ಮ ಹಾಗೂ ಸಾಮಾಜಿಕ ಸೇವೆಗೆ ಹೆಸರಾದದ್ದು. ಸಾಯಿರಾಂ ಗೋಪಾಲಕೃಷ್ಣ ಭಟ್ಟರು ಹಾಕಿಕೊಟ್ಟ ದಾರಿಯಲ್ಲಿಯೇ ಅವರ ಪುತ್ರ ಸಾಯಿರಾಂ ಕೃಷ್ಣ ಭಟ್ಟರು ಸಾಗುತ್ತಿರುವುದು ಅತ್ಯಂತ ಪ್ರಶಂಸನೀಯ. ಕಷ್ಟದಲ್ಲಿರುವ ಬಡಜನರ ಬಾಳಿಗೆ ಆಸರೆಯಾಗುವ ಮತ್ತು ಅವರ ಅಗತ್ಯಕ್ಕೆ ತಕ್ಕಂತೆ ನೆರವು ನೀಡುವ ಇಂತಹ ಮಹತ್ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.
ಸಾಯಿರಾಂ ಕೃಷ್ಣ ಭಟ್ಟರು ಮಾತನಾಡಿ, ತಂದೆಯವರು ನೀಡಿದ ಮುಖ್ಯ ಸಂಸ್ಕಾರವೇ ದೀನದಲಿತರ ಮತ್ತು ಕಷ್ಟದಲ್ಲಿರುವವರ ಸೇವೆಯನ್ನು ಮಾಡುವುದು. ಅವರ ಹಾದಿಯಲ್ಲಿ ನಡೆಯುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ನಮ್ಮಲ್ಲಿರುವ ಸಂಪನ್ಮೂಲವನ್ನು ಅಗತ್ಯವಿರುವ ಬಡಜನರೊಂದಿಗೆ ಹಂಚಿಕೊಂಡಾಗ ಲಭಿಸುವ ತೃಪ್ತಿ ಮತ್ಯಾವುದರಲ್ಲೂ ಸಿಗುವುದಿಲ್ಲ. ಬಡಜನರ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಸಾಮಾಜಿಕ ಹೊಣೆಗಾರಿಕೆ. ಮುಂದಿನ ದಿನಗಳಲ್ಲೂ ಗ್ರಾಮದ ಮತ್ತು ಸುತ್ತಮುತ್ತಲ ಪ್ರದೇಶದ ಅರ್ಹ ಫಲಾನುಭವಿಗಳಿಗೆ, ಶಿಕ್ಷಣ, ಆರೋಗ್ಯ ಹಾಗೂ ಜೀವನೋಪಾಯದ ಕಷ್ಟಗಳಲ್ಲಿರುವ ಜನರಿಗೆ ನನ್ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಬೆಂಬಲ ಮತ್ತು ನೆರವನ್ನು ನೀಡಲು ನಾನು ಬದ್ಧನಾಗಿದ್ದೇನೆ ಎಂದರು. ವಿದ್ಯಾಭ್ಯಾಸಕ್ಕಾಗಿ ಅದಿಕ್ ಬಾಬು, ಮನೆ ದುರಸ್ಥಿಗೆ ಮುರಳೀಧರ ಕೆ., ಮನೆಯ ವಯರಿಂಗ್ ಕೆಲಸಕ್ಕೆ ಫಕ್ಕೀರ, ಚಿಕಿತ್ಸೆಗೆ ಮೀನಾಕ್ಷಿ, ಜೀವನೋಪಾಯಕ್ಕಾಗಿ ರಮೇಶ ಸುಳ್ಯ ಎಂಬವರಿಗೆ ಧನಸಹಾಯ ನೀಡಲಾಯಿತು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ ಸರಳಿ, ಶಾರದಾ ಗೋಪಾಕೃಷ್ಣ ಭಟ್, ಶೀಲಾ ಕೆ.ಎನ್.ಭಟ್, ಶ್ರೀಕೃಷ್ಣ ಅಡಿಗ ಈ ಸಂದರ್ಭದಲ್ಲಿ ಜೊತೆಗಿದ್ದರು.

.jpg)
.jpg)
