ಚೆನ್ನೈ: ನಟಿ ತ್ರಿಶಾ ವಿರುದ್ಧ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ನೀಡಿದ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪೊಲೀಸರು ಮಂಗಳವಾರ (ಆ.4) ಬೆಳಿಗ್ಗೆ ಚೆನ್ನೈನ ಅವರ ನಿವಾಸದಲ್ಲೇ ಬಂಧಿಸಿದ್ದಾರೆ. ಈ ಬೆಳವಣಿಗೆ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ತಂಜಾವೂರಿನಲ್ಲಿ ನಡೆದ ಕಾವೇರಿ ನೀರು ಹಂಚಿಕೆ ಕುರಿತ ಪ್ರತಿಭಟನಾ ಸಮಾವೇಶದಲ್ಲಿ ಉದಯನಿಧಿ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಶಾ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದು ಮುಖ್ಯಮಂತ್ರಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಹಾಗೂ 'ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ನಡುವೆ ಭಾರಿ ಸಂಘರ್ಷಕ್ಕೆ ಕಾರಣವಾಗಿತ್ತು.
ಬಂಧನದ ವೇಳೆ ನಗುತ್ತಲೇ ಮನೆಯಿಂದ ಹೊರಬಂದ ಉದಯನಿಧಿ ಸ್ಟಾಲಿನ್, ಈ ಬಂಧನವನ್ನು ಒಂದು 'ತಮಾಷೆ' ಎಂದು ಕರೆದಿದ್ದು, ಇದನ್ನು ಕಾನೂನಾತ್ಮಕವಾಗಿ ಎದುರಿಸುವುದಾಗಿ ಹೇಳಿದ್ದಾರೆ.
ಅಷ್ಟಕ್ಕೂ ಭಾಷಣದಲ್ಲಿ ಹೇಳಿದ್ದೇನು?
ಕಾವೇರಿ ವಿವಾದದ ಕುರಿತು ತಂಜಾವೂರಿನಲ್ಲಿ ನಡೆದ ಸಭೆಯಲ್ಲಿ ಉದಯನಿಧಿ ಅವರು ಮುಖ್ಯಮಂತ್ರಿ ವಿಜಯ್ ಅವರ ಆಡಳಿತದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಸಭೆಯಲ್ಲಿದ್ದ ನೆರೆದಿದ್ದ ಅಭಿಮಾನಿಯೊಬ್ಬರು 'ತ್ರಿಶಾ.. ತ್ರಿಶಾ' ಎಂದು ಘೋಷಣೆ ಕೂಗಿದರು. ಈ ವೇಳೆ ತಮ್ಮ ಭಾಷಣ ಅರ್ಧಕ್ಕೆ ನಿಲ್ಲಿಸಿದ ಉದಯನಿಧಿ, 'ನೀರು ಎಲ್ಲಿಗೆ ತಲುಪುತ್ತದೋ ಇಲ್ಲವೋ, ಅಲ್ಲಿಗೆ ತಲುಪಲೇಬೇಕು. ನಾನು ಹೇಳಿದ್ದು ಕಾವೇರಿ ನೀರನ್ನು' ಎಂದು ದ್ವಂದ್ವಾರ್ಥದಲ್ಲಿ ಮಾತನಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಘಟನೆಯ ಬೆನ್ನಲ್ಲೇ, ಉದಯನಿಧಿ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ಟಿವಿಕೆ, ಪೊಲೀಸರಿಗೂ ದೂರು ಸಲ್ಲಿಸಿ ತಕ್ಷಣದ ಕ್ರಮಕ್ಕೆ ಆಗ್ರಹಿಸಿತ್ತು. 'ಸಾರ್ವಜನಿಕ ವೇದಿಕೆಯಲ್ಲಿದ್ದುಕೊಂಡು ಮಹಿಳೆಯೊಬ್ಬರ ವಿರುದ್ಧ ಈ ರೀತಿಯ ಅಶ್ಲೀಲ ದ್ವಂದ್ವಾರ್ಥದ ಮಾತುಗಳನ್ನು ಆಡುವುದು ಮಹಿಳೆಯರ ಮೇಲಿನ ಶೋಷಣೆ ಹಾಗೂ ನಿಂದನೆಯನ್ನು ಪ್ರಚೋದಿಸುತ್ತದೆ' ಎಂದು ಪಕ್ಷ ತನ್ನ ದೂರಿನಲ್ಲಿ ಉಲ್ಲೇಖಿಸಿತ್ತು.
ಇನ್ನು, ಉದಯನಿಧಿ ಅವರನ್ನು ಬಂಧಿಸುತ್ತಿದ್ದಂತೆ ಈ ಬಗ್ಗೆ ಡಿಎಂಕೆ ಪಕ್ಷ ತೀವ್ರವಾಗಿ ಖಂಡಿಸಿದ್ದು, ಇದು ರಾಜಕೀಯ ಸೇಡಿನ ಕ್ರಮ ಎಂದು ಟೀಕಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ಹಿರಿಯ ನಾಯಕ ಟಿ.ಕೆ.ಎಸ್. ಇಳಂಗೋವನ್, 'ಉದಯನಿಧಿ ಅವರು ಯಾರ ವಿರುದ್ಧವೂ ಆಕ್ಷೇಪಾರ್ಹವಾಗಿ ಮಾತನಾಡಿಲ್ಲ. ಅವರು ಸಿಎಂ ವಿಜಯ್ ಅವರ ವೈಫಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ಭಾಷಣದಲ್ಲಿ ಯಾರನ್ನೂ ನಿಂದಿಸಿಲ್ಲ. ಅವರು ತ್ರಿಶಾ ಅವರ ಹೆಸರನ್ನೂ ಹೇಳಿಲ್ಲ' ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ ಡಿಎಂಕೆಯ ಈ ಆರೋಪವನ್ನು ತಳ್ಳಿಹಾಕಿರುವ ಟಿವಿಕೆ ನಾಯಕ ಅಮೆರಿಕೈ ನಾರಾಯಣನ್, 'ಉದಯನಿಧಿ ಅವರನ್ನು ಮುಖ್ಯಮಂತ್ರಿ ವಿಜಯ್ ಅಥವಾ ಟಿವಿಕೆ ವಿರುದ್ಧ ಮಾತನಾಡಿದ್ದಕ್ಕೆ ಬಂಧಿಸಿಲ್ಲ, ಬದಲಿಗೆ ಮಹಿಳೆಯೊಬ್ಬರಿಗೆ ಮಾಡಿದ ಅಪಮಾನಕ್ಕಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಉದಯನಿಧಿ ತಮ್ಮ ಹೆಸರನ್ನು ವಲ್ಗರ್ ನಿಧಿ (ಅಶ್ಲೀಲ ನಿಧಿ) ಎಂದು ಬದಲಾಯಿಸಿಕೊಳ್ಳುವುದು ಒಳಿತು' ಎಂದು ಲೇವಡಿ ಮಾಡಿದ್ದಾರೆ.
ತಮಿಳುನಾಡಿನಾದ್ಯಂತ ಡಿಎಂಕೆ ಪ್ರತಿಭಟನೆ..
ಉದಯನಿಧಿ ಅವರ ಬಂಧನದ ಬೆನ್ನಲ್ಲೇ ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರು ದಿಢೀರ್ ರಸ್ತೆ ತಡೆ ಹಾಗೂ ಪ್ರತಿಭಟನೆಗೆ ಧುಮುಕಿದ್ದಾರೆ. ಆಗಸ್ಟ್ 5ರಿಂದ ತಮಿಳುನಾಡು ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಮುಂದಿನ ಕಾನೂನಾತ್ಮಕ ಹೋರಾಟದ ಕುರಿತು ಪಕ್ಷದ ಪ್ರಧಾನ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ್ದಾರೆ.
ಇನ್ನೊಂದೆಡೆ, ಉದಯನಿಧಿ ಅವರಿಗೆ ಮುಂಗಡ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಲಾಗಿದ್ದು, 'ಉದಯನಿಧಿ ಅವರ ಹೇಳಿಕೆಯನ್ನು ತಿರುಚಲಾಗಿದೆ' ಎಂದು ಡಿಎಂಕೆ ಹಿರಿಯ ನಾಯಕ ಕೆ.ಎನ್. ನೆಹರೂ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರು ತಮ್ಮನ್ನು ಕರೆದೊಯ್ಯುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಉದಯನಿಧಿ, 'ನಾನು ಮುಖ್ಯಮಂತ್ರಿಯವರ ಹೆಸರನ್ನು ಹೊರತುಪಡಿಸಿ ಬೇರೆ ಯಾರ ಹೆಸರನ್ನೂ ಹೇಳಿಲ್ಲ. ಹಾಗಿದ್ದರೂ ಹೀಗೇಕೆ ನಡೆಯುತ್ತಿದೆ ಎಂಬುದು ನಿಮಗೆ ಗೊತ್ತಿಲ್ಲವೇ? ನ್ಯಾಯಾಲಯವೇ ಎಲ್ಲವನ್ನೂ ತೀರ್ಮಾನಿಸಲಿದೆ' ಎಂದು ತಿರುಗೇಟು ನೀಡಿದ್ದಾರೆ.

