ಉಪ್ಪಳ: ಕಡಲ್ಕೊರೆತದಿಂದ ಮನೆ, ಬೆಳೆ ಕಳೆದುಕೊಂಡ ಜನರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದಲ್ಲಿ 11 ಸದಸ್ಯರ ಶಾರದಾನಗರ ಉಳಿಸಿ ಕ್ರಿಯಾ ಸಮಿತಿಯನ್ನು ರೂಪೀಕರಿಸಲಾಯಿತು. ಶಾರದಾನಗರ ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಂಗಲ್ಪಾಡಿ ಪಂಚಾಯತಿಯ ಶಾರದಾ ನಗರದಲ್ಲಿ ಮೀನು ಕಾರ್ಮಿಕರು ಸಹಿತದ ತೀರ ನಿವಾಸಿಗಳು ಮನೆ, ಭೂಮಿ ಕಳೆದುಕೊಂಡಿದ್ದು, ಇವರಿಗೆ ಮನೆ ನಿರ್ಮಿಸಲು 40 ಲಕ್ಷ ರೂ., ಮನೆ ಕಳೆದುಕೊಂಡವರಿಗೆ 25 ಲಕ್ಷ ರೂ. ಸರ್ಕಾರ ಒದಗಿಸಬೇಕೆಂದು ಕ್ರಿಯಾ ಸಮಿತಿ ರೂಪೀಕರಣ ಸಭೆಯಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಒತ್ತಾಯಿಸಿದರು. ತೆಂಗಿನ ಮರ ಕಳೆದುಕೊಂಡವರಿಗೆ 5 ಸಾವಿರ ರೂ.ನಂತೆ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.
ಜಾತಿ, ಧರ್ಮ ಅಥವಾ ರಾಜಕೀಯವನ್ನು ಲೆಕ್ಕಿಸದೆ ಎಲ್ಲರು ಕ್ರಿಯಾ ಸಮಿತಿಯೊಂದಿಗೆ ಸಹಕರಿಸಿ ಸರ್ಕಾರದಿಂದ ಲಭಿಸಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಬಿ. ವಿಕ್ರಮ್ ಪೈ ನುಡಿದರು. ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಒ.ಬಿ.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಮಾತನಾಡಿದರು. ಸಮಿತಿ ಅಧ್ಯಕ್ಷರಾಗಿ ಶಶಿಕಾಂತ ಕಡಪ್ಪುರ, ಉಪಾಧ್ಯಕ್ಷರಾಗಿ ಜಯರಾಮ್ ಹನುಮಾನ್ ನಗರ, ಶರ್ಮಿಳ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಹನುಮಾನ್ ನಗರ, ಕಾರ್ಯದರ್ಶಿಗಳಾಗಿ ರಂಜಿತ್ ಶಾರದಾನಗರ, ಜಯಶ್ರೀ ಜನಾರ್ದನ ಶಾರದಾನಗರ, ಕೋಶಾಧಿಕಾರಿಯಾಗಿ ಮನು ಶಾರದಾನಗರ, ಎಕ್ಸಿಕ್ಯೂಟಿವ್ ಸದಸ್ಯರಾಗಿ ವಿಕ್ರಮ್ ಪೈ, ಕೆ.ಪಿ. ವಲ್ಸರಾಜ್, ಹರಿ ಶಾರದಾನಗರ ಆಯ್ಕೆಯಾದರು.

.jpg)
