ತಿರುವನಂತಪುರಂ: ಕೇರಳದ ಅತೀ ಉತ್ತರದಲ್ಲಿರುವ ಮಂಜೇಶ್ವರ ತಾಲೂಕಿನ ಆರೋಗ್ಯ ಕ್ಷೇತ್ರದಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ತಿರುವನಂತಪುರದಲ್ಲಿ ವಿಶೇಷ ಸಭೆ ನಡೆಯಿತು.
ಮಂಜೇಶ್ವರ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಆರೋಗ್ಯ ಕ್ಷೇತ್ರದಲ್ಲಿ ಕಾಣಲಾಗಿದ್ದ ಹಿನ್ನಡೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿತ್ತು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರ ವಿಶೇಷ ವಿನಂತಿಯ ಮೇರೆಗೆ ಆರೋಗ್ಯ ಸಚಿವ ಕೆ. ಮುರಳೀಧರನ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಮಂಜೇಶ್ವರ ಬ್ಲೋಕ್ ಪಂಚಾಯಿತಿ ಅಧ್ಯಕ್ಷ ಯು.ಕೆ. ಸೈಫುಲ್ಲ ತಙಳ್ ಅವರು ಸಚಿವರಿಗೆ ಸಮಗ್ರ ವರದಿ ಮಂಡಿಸಿದರು. ಸಭೆಯಲ್ಲಿ ಮಂಜೇಶ್ವರ ಕ್ಷೇತ್ರದ ವಿವಿಧ ಆರೋಗ್ಯ ಸೇವಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರಮುಖ ಅಧಿಕಾರಿಗಳು ಭಾಗವಹಿಸಿದರು.
ಮಂಜೇಶ್ವರ ತಾಲೂಕು ಆಸ್ಪತ್ರೆಯ ಪ್ರಸಕ್ತ ಕೈಗೊಳ್ಳಬೇಕಾದ ಮೂಲಸೌಕರ್ಯ ಹಾಗೂ ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಕ್ಷಣ ಕೈಗೊಳ್ಳಬೇಕಾದ ನವೀಕರಣ ಕಾರ್ಯಗಳ ಕುರಿತು, ಕ್ಷೇತ್ರದ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳು ಹಾಗೂ ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಶಾಸಕ ಎ.ಕೆ.ಎಂ ಅಶ್ರಫ್ ಅವರು ಸಚಿವರಿಗೆ ವಿವರಿಸಿದರು.
ಮಂಜೇಶ್ವರ ತಾಲೂಕಿನ ಜನರ ಬಹುಕಾಲದ ಬೇಡಿಕೆಯಾದ ತಾಲೂಕು ಆಸ್ಪತ್ರೆಗೆ 200 ರೋಗಿಗಳನ್ನು ಒಳಗೊಂಡು ಚಿಕಿತ್ಸೆ ನೀಡುವ ಸಾಮಥ್ರ್ಯವಿರುವ ಆಸ್ಪತ್ರೆಯಾಗಿ ಹಾಗೂ ಟ್ರಾಮಾ ಸೆಂಟರ್ ಆಗಿ ಮೇಲ್ದರ್ಜೆಗೆ ಏರಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಜೊತೆಗೆ ಪ್ರದೇಶದ ಇತರ ಆರೋಗ್ಯ ಸಂಸ್ಥೆಗಳ ನವೀಕರಣ ಹಾಗೂ ಅಗತ್ಯವಾದ ಹೊಸ ಹುದ್ದೆಗಳ ಸೃಷ್ಟಿಗೆ ಸರ್ಕಾರ ತುರ್ತು ಪ್ರಾಮುಖ್ಯತೆಯೊಂದಿಗೆ ಕ್ರಮ ಕೈಗೊಳ್ಳುವುದಾಗಿಯೂ ಸಚಿವರು ಭರವಸೆ ನೀಡಿದರು.
'ಕಿಫ್ಬಿ'ಯಿಂದ ಅನುದಾನ ನೀಡಲಾಗಿರುವ ನಿರ್ಮಾಣ ಕಾರ್ಯಗಳನ್ನು ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸಲು ಸಂಬಂಧಿತ ಕಿಟ್ಕೋ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ತಾಲೂಕು ಆಸ್ಪತ್ರೆಯಲ್ಲಿ ಯೋಜನಾ ನಿಧಿಯಿಂದ ಅನುಮೋದಿಸಲ್ಪಟ್ಟಿರುವ ಸೀವೇಜ್ ಟ್ರೀಟ್ಮೆಂಟ್ ಪ್ಲಾಂಟ್ ನಿರ್ಮಾಣವನ್ನು ಕಿಟ್ಕೋಗೆ ಒಪ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೇರಳದ ಅತ್ಯಂತ ಉತ್ತರದಲ್ಲಿರುವ ಮಂಜೇಶ್ವರದ ತಾಲೂಕು ವ್ಯಾಪ್ತಿಯಲ್ಲಿ ಆರೋಗ್ಯ ಹಾಗೂ ಇತರ ಇಲಾಖೆಗಳಲ್ಲಿನ ಸಿಬ್ಬಂದಿಕೊರತೆ ಕಾಡುತ್ತಿದೆ. ಇದು ಆರೋಗ್ಯ ಕ್ಷೇತ್ರವನ್ನು ಗಂಭೀರವಾಗಿ ಬಾಧಿಸುತ್ತಿರುವ ವಿಚಾರವನ್ನು ಸೈಫುಲ್ಲಾ ತಙಳ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪರಿಹಾರವಾಗಿ ಇಂತಹ ದೂರದ ಹಿಂದುಳಿದ ಪ್ರದೇಶಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ 30% ಹೆಚ್ಚುವರಿ ಭತ್ಯೆಯೊಂದಿಗೆ ವಿಶೇಷ ನೇಮಕಾತಿ ಮಾಡುವ ಕುರಿತು ಪ್ರಾಥಮಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.



